ಆಲೂರು: ಜನವಸತಿ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ನಡೆಸುತ್ತಿರುವುದನ್ನು ಕೂಡಲೆ ನಿಲ್ಲಿಸುವಂತೆ ಅರಣ್ಯ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು. ಕೂಡಲೆ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ತಾಲ್ಲೂಕಿನ ಕೆ.ಹೊಸಕೋಟೆ ಹೋಬಳಿ ಹೊಸಮಠ ಗ್ರಾಮದಲ್ಲಿರುವ ಶಿಲುಬೆಬೆಟ್ಟದಲ್ಲಿ, ಅಕ್ರಮ ಕಲ್ಲು ಗಣಿಗಾರಿಕೆ ವಿರೋಧಿಸಿ ಅಕ್ಕಪಕ್ಕದ ಗ್ರಾಮಸ್ಥರು ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವುದನ್ನು ಗಮನಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಸುದ್ದಿಗಾರರೊಂಗಿದೆ ಮಾತನಾಡಿದರು.
‘ಕಾಡಾನೆಗಳು ವಾಸಿಸುತ್ತಿರುವ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಡೈನಾಮೈಟ್ ಬಳಸಿ ಕಲ್ಲು ಗಣಿಗಾರಿಕೆ ಮಾಡಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಈ ಕಲ್ಲು ಕ್ವಾರಿ ಪಕ್ಕದಲ್ಲಿ ಜನರು ವಾಸಿಸುತ್ತಿರುವ ಹಲವು ಮನೆಗಳು ಡೈನಾಮೈಟ್ ಸ್ಪೋಟದಿಂದಾಗಿ ಬಿರುಕು ಬಿಟ್ಟಿವೆ. ಈ ಸಂಬಂಧವಾಗಿ ಗ್ರಾಮಸ್ಥರು ಹಲವಾರು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ’ ಎಂದರು.
ರೈತ ಸಂಘದ ರಾಜ್ಯ ಸಂಚಾಲಕ ಮಹಮ್ಮದ್ ಸಾಧಿಕ್, ಕರವೇ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅರುಣ ಭಾಸ್ಕರ್, ಆಲೂರು ತಾಲೂಕು ಕರವೇ ಅಧ್ಯಕ್ಷ ರಾಘವೇಂದ್ರ, ಸಕಲೇಶಪುರ ತಾಲೂಕ್ ಅಧ್ಯಕ್ಷ ರಮೇಶ್ ಪೂಜಾರಿ, ದುದ್ದ ರೇವಣ್ಣ, ಸತೀಶ್ ದುದ್ದ, ಮಂಜೇಗೌಡ, ಸಂಜು ಹಾಗೂ ಗ್ರಾಮಸ್ಥರು ಇದ್ದರು.
ಇಲ್ಲಿಯ ಗಣಿಗಾರಿಕೆ ನಿಲ್ಲಿಸಬೇಕೆಂದು ಒತ್ತಾಯಕ್ಕೆ ಸಚಿವರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆಬಾಬು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಪುನಃ ಗಣಿಗಾರಿಕೆಗೆ ಅವಕಾಶ ನೀಡಬಾರದು
‘ಕಲ್ಲುಗಣಿಗಾರಿಕೆಯಿಂದ ಇಷ್ಟೆಲ್ಲ ಆದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿರುವವರೆಲ್ಲರೂ ರೈತಾಪಿ ವರ್ಗದವರಾಗಿದ್ದು ಈಗಾಗಲೇ ಕಾಡಾನೆ ಸಮಸ್ಯೆಗೆ ಸಿಲುಕಿ ನಲುಗಿ ಹೋಗಿದ್ದಾರೆ. ಈಗ ಇವರ ಜಮೀನಿನಲ್ಲಿ ಗಣಿಗಾರಿಕೆಯ ಪರಿಣಾಮ ಧೂಳು ಹಾಗೂ ತ್ಯಾಜ್ಯ ತುಂಬಿಕೊಂಡು ಬೆಳೆ ಬೆಳೆಯಲಾಗದೆ ಜಮೀನನ್ನು ಬೀಳು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತ ಸಂಘಟನೆ ರೈತರ ಹಿತ ಕಾಯಲು ಸದಾ ಸನ್ನದ್ಧರಾಗಿದ್ದು ಯಾವುದೇ ಕಾರಣಕ್ಕೂ ಅವರಿಗೆ ತೊಂದರೆ ಆಗಲು ಬಿಡುವುದಿಲ್ಲ. ಗ್ರಾಮಸ್ಥರು ಹಾಗೂ ಕಾಡುಪ್ರಾಣಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ಜಾಗದಲ್ಲಿ ಅವರಿಗೆ ಗಣಿಗಾರಿಕೆ ನೀಡಿದರೆ ನಮ್ಮದೇನೂ ತಕರಾರಿಲ್ಲ. ಆದರೆ ಇಲ್ಲಿ ಪುನಃ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.