ADVERTISEMENT

ಮುಚ್ಚಿಹೋಗಿದ್ದ ಕಲ್ಯಾಣಿಗೆ ಮರುಜೀವ

ನರೇಗಾ ಯೋಜನೆಯಡಿ ಅಭಿವೃದ್ಧಿ; ಶುದ್ಧ ನೀರಿನಿಂದ ಕಂಗೊಳಿಸುತ್ತಿರುವ ಕಲ್ಯಾಣಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 4:18 IST
Last Updated 25 ಜೂನ್ 2021, 4:18 IST
ಕೊಣನೂರು ಹೋಬಳಿಯ ಹೊನಗಾನಹಳ್ಳಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಕಲ್ಯಾಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ
ಕೊಣನೂರು ಹೋಬಳಿಯ ಹೊನಗಾನಹಳ್ಳಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಕಲ್ಯಾಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ   

ಕೊಣನೂರು: ಹೋಬಳಿಯ ಹೊನಗಾನಹಳ್ಳಿ ಗ್ರಾಮದ ಕೆರೆಯಂಗಳ ದಲ್ಲಿ ಮುಚ್ಚಿ ಹೋಗಿದ್ದ ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸಿದ್ದು, ಈಗ ನೀರು ಸಂಗ್ರಹಗೊಂಡು ಜೀವಕಳೆಯಿಂದ ಕಂಗೊಳಿಸುತ್ತಿದೆ.

ಈ ಕಲ್ಯಾಣಿಯು ಶಿಥಿಲಗೊಂಡು ಮಣ್ಣು, ಕಸದಿಂದ ಮುಚ್ಚಿ ಹೋಗಿತ್ತು. ಇಲ್ಲಿ ಕಲ್ಯಾಣಿ ಇದೆ ಎಂಬ ಕುರುಹು ಸಹ ಸಿಗದಂತಾಗಿತ್ತು. ಇದನ್ನು ಪತ್ತೆ ಮಾಡಿದ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿಪಡಿಸಿದ್ದಾರೆ.

ಗ್ರಾಮದ ಕೆರೆ 7 ಎಕರೆ 5 ಗುಂಟೆ ವಿಸ್ತೀರ್ಣ ಹೊಂದಿದೆ. ಇದಕ್ಕೆ ಹೊಂದಿ ಕೊಂಡಂತೆ 70X70 ವಿಸ್ತೀರ್ಣದ ಕಲ್ಯಾಣಿಯನ್ನು ₹10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಸುಮಾರು 100 ವರ್ಷಗಳ ಹಿಂದೆ ಈ ಕಲ್ಯಾಣಿಯನ್ನು ನಿರ್ಮಿಸಿದ್ದು, ಪ್ರತಿನಿತ್ಯ ದೇವಾಲಯ ಉಪಯೋಗಕ್ಕೆ ಇದೇ ಕಲ್ಯಾಣಿಯ ನೀರನ್ನು ಬಳಸಲಾಗುತ್ತಿತ್ತು. ಗ್ರಾಮದ ಜನರಿಗೂ ಕುಡಿಯುವ ನೀರಿನ ಮೂಲವಾಗಿತ್ತು. ಆದರೆ, ಕಾಲಾನಂತರದಲ್ಲಿ ಕಲ್ಯಾಣಿ ಶಿಥಿಲಗೊಂಡು ಮುಚ್ಚಿ ಹೋಗಿತ್ತು.

ADVERTISEMENT

ಕಲ್ಯಾಣಿಯನ್ನು ಪುನರುಜ್ಜೀವನ ಗೊಳಿಸಿದ ಬಳಿಕ ಶುದ್ಧ ನೀರು ಸಂಗ್ರಹ ಗೊಂಡಿದೆ.

ಹೀಗಾಗಿ, ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ ಕಲ್ಯಾಣಿಗೆ ಗುರುವಾರ ಪೂಜೆ ಸಲ್ಲಿಸಿ ದರು. ಕೆರೆಯ ಸುತ್ತ ಗಿಡಗಳನ್ನು ನೆಡುವ ಕಾರ್ಯಕ್ಕೂ ಚಾಲನೆ ನೀಡಿದರು.

‘ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್‌ ಅವರ ಪ್ರಯತ್ನದ ಫಲವಾಗಿ ಕಲ್ಯಾಣಿಗೆ ಮರುಜೀವ ಬಂದಿದೆ. ಪ್ರತಿ ಗ್ರಾಮದಲ್ಲೂ ಕೆರೆಕಟ್ಟೆ, ಕಲ್ಯಾಣಿಗಳಿದ್ದು, ಅವುಗಳನ್ನು ಸಂರಕ್ಷಿಸಬೇಕು. ಶಿಥಿಲಾವಸ್ಥೆಯಲ್ಲಿದ್ದರೆ ಪುನರುಜ್ಜೀವನಗೊಳಿಸಬೇಕು’ ಎಂದು ಎ.ಟಿ.ರಾಮಸ್ವಾಮಿ ಹೇಳಿದರು.

***

ಗ್ರಾಮಕ್ಕೆ ಕುಡಿಯುವ ನೀರಿನ ಮೂಲವಾಗಿದ್ದ ಕಲ್ಯಾಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಜಲಮೂಲಗಳನ್ನು ಉಳಿಸಿಕೊಳ್ಳಬೇಕು.

-ಶ್ರೀನಾಥ್, ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.