ಸಕಲೇಶಪುರ: ‘ಕನ್ನಡ ನನ್ನ ತಾಯಿ ಭಾಷೆ ಎಂದು ಎದೆ ತಟ್ಟಿ ಹೇಳಿ’ ಎಂದು ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.
ಇಲ್ಲಿಯ ರೋಟರಿ ಸಂಸ್ಥೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು. ‘ಜಗತ್ತಿನ ಸರ್ವ ಶ್ರೇಷ್ಠ ಮೂರು ಭಾಷೆಗಳಲ್ಲಿ ಕನ್ನಡವೂ ಒಂದು. ಮಾತನಾಡಲು, ಮಾತನಾಡಿದಂತೆ ಬರೆಯಲು ಲಿಪಿ, ಸಮಾಸ, ವ್ಯಾಕರಣ ಬದ್ಧವಾದ ಭಾಷೆ ಕನ್ನಡ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ’ ಎಂದರು.
‘ತಂದೆ ತಾಯಿ ಇದ್ದಾಗ ಅವರೊಂದಿಗೆ ಪ್ರೀತಿ ವಿಶ್ವಾಸದಿಂದ ಇರಿ, ಅವರು ಸತ್ತ ನಂತರ ಸ್ಮಾರಕ ಮಾಡಿ ಏನು ಪ್ರಯೋಜನ. ನಿಜಲಿಂಗಪ್ಪ ಅವರು ಮೂರು ಬಾರಿ ಮುಖ್ಯಮಂತ್ರಿಯಾದರೂ ಅವರಿಗೆ ಸ್ವಂತ ನಿವೇಶನ ಕೂಡ ಇರಲಿಲ್ಲ. ಅವರ ಆದರ್ಶವನ್ನು ಇಂದಿನ ರಾಜಕಾರಣಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಅಭಿನಂದನೆ ಸ್ವೀಕರಿಸಿದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ‘ಈ ತಾಲ್ಲೂಕಿನಲ್ಲಿ ಒಬ್ಬ ಜನಪ್ರತಿನಿಧಿ ಮಾಡುವುದಕ್ಕಿಂತ ಹೆಚ್ಚು ಸೇವೆಯನ್ನು ಇಲ್ಲಿಯ ರೋಟರಿ ಸಂಸ್ಥೆ ಮಾಡುತ್ತಿದೆ. ಟೋಲ್ಗೇಟ್ನಲ್ಲಿ ಬಸ್ ನಿಲ್ದಾಣ, ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಬಳಿ ಶುದ್ಧ ಕುಡಿಯುವ ನೀರಿನ ಘಟಕ, ಹೇಮಾವತಿ ಸೇತುವೆ ಬಳಿ ಜಿಲ್ಲೆಯ ಜೀವ ನದಿ ಹೇಮಾವತಿ ಪ್ರತಿಮೆ ನಿರ್ಮಾಣ ಸೇರಿ ಸಾಕಷ್ಟು ಜನೋಪಯೋಗಿ ಕೆಲಸಗಳನ್ನು ರೋಟರಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
‘ಕ್ಷೇತ್ರದ ಮೂಲಸೌಕರ್ಯಗಳಿಗಾಗಿ ಶಕ್ತಿ ಮೀರಿ ಶ್ರಮಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ಸಲಹೆ ಸಹಕಾರ ಪಡೆಯುತ್ತೇನೆ’ ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಸಹನಾ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಅವಿನಾಶ್ ಹಾಗೂ ಪಂಕಜಾ ವಿಜಯಶಂಕರ್ ಅತಿಥಿ ಪರಿಚಯ ಮಾಡಿದರು. ಶ್ವೇತಾ ಖಂಡಿಗೆ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು, ಪತ್ನಿ ಪ್ರತಿಭಾ ಮಂಜು, ಚಿತ್ರನಟ ದೊಡ್ಡಣ್ಣ ಅವರನ್ನು ಅಭಿನಂದಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.