
ಹಾಸನ: ರಾಷ್ಟ್ರೀಯ ಅಪರಾಧ ವರದಿ ಪ್ರಕಾರ ಜೀತ ಪದ್ಧತಿಯಲ್ಲಿ ಕರ್ನಾಟಕ 3 ನೇ ಸ್ಥಾನದಲ್ಲಿದೆ ಎಂದು ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್ನ ಸಹ ಕಾರ್ಯದರ್ಶಿ ವಿಲಿಯಂ ಕ್ರಿಸ್ತೋಫರ್ ಹೇಳಿದರು.
ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್ ಸಹಯೋಗದೊಂದಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ಧ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ-1976ರ ಕಾನೂನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಕುರಿತು ನಡೆದ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೀತ ಪದ್ಧತಿ ಒಳಗಾದವರಿಗೆ ಪುನರ್ವಸತಿ ಕಲ್ಪಿಸಬೇಕು. ಮಾನವ ಕಳ್ಳಸಾಗಾಣಿಕೆಯೂ ಜೀತ ಪದ್ಧತಿಯೊಳಗೆ ಸೇರಿದ್ದು, ಅದನ್ನು ತಪ್ಪಿಸುವುದು ಸರ್ಕಾರ ಹಾಗೂ ಸಾರ್ವಜನಿಕರ ಕರ್ತವ್ಯ. ಜೀತ ಪದ್ಧತಿಯ ವಿಧಗಳನ್ನು ಗುರುತಿಸುವಿಕೆ, ಪುನರ್ವಸತಿ ಕಲ್ಪಿಸುವುದರ ಕುರಿತು ಮಾಹಿತಿ ತಿಳಿದು ಗ್ರಾಮೀಣ ಮಟ್ಟದಿಂದ ಕಾರ್ಯಗತಗೊಳಿಸುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ಜೀತ ಪದ್ಧತಿ ಮುಕ್ತ ರಾಜ್ಯಕ್ಕಾಗಿ ಎಲ್ಲರೂ ಶ್ರಮಿಸಬೇಕು. ಪುನರ್ವಸತಿ ಕಲ್ಪಿಸುವಾಗ ಸರಿಯಾಗಿ ಸವಲತ್ತು ತಲುಪಿಸಬೇಕು. ಅದಕ್ಕಾಗಿ ಮಾಹಿತಿ ತಿಳಿದುಕೊಂಡು ಕೆಳ ಹಂತದಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಜೀತ ಪದ್ಧತಿ ಕುರಿತು ನಡೆಸಿದ ಕಾರ್ಯಚಟುವಟಿಕೆಯ ಪರಿಶೀಲನಾ ವರದಿಯು ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾಧಿಕಾರಿವರೆಗೂ ಹಂತ ಹಂತವಾಗಿ ಸಭೆಯಲ್ಲಿ ಮಂಡನೆಯಾಗಿ, ರಾಜ್ಯ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ತಿಳಿದುಕೊಂಡು ಎಲ್ಲರೂ ಸಹಕರಿಸಬೇಕು ಎಂದು ಕವಿತಾ ತಿಳಿಸಿದರು.
ಉಪವಿಭಾಗಾಧಿಕಾರಿಗಳಾದ ನವೀನ್ ಭಟ್, ಗಿರೀಶ್ ನಂದನ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್ ಹಾಜರಿದ್ದರು.
ತಹಶೀಲ್ದಾರರು, ಉಪ ತಹಶೀಲ್ದಾರರು ಸೇರಿದಂತೆ ಅಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.