ಹೊಳೆನರಸೀಪುರ: ಇಲ್ಲಿನ ಸಾರಿಗೆ ಸಂಸ್ಥೆ ಘಟಕದ ವ್ಯವಸ್ಥಾಪಕಿ, ಘಟಕದ ಮಹಿಳಾ ಸಿಬ್ಬಂದಿಯಿಂದ ಬಸ್ ನಿಲ್ದಾಣ ಸ್ವಚ್ಛಗೊಳಿಸುವ ಕೆಲಸ ಮಾಡಿಸಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು ಅಧಿಕಾರಿಯ ನಡೆಯನ್ನು ಖಂಡಿಸಿದ್ದಾರೆ.
ಸ್ವಚ್ಛತಾ ಕಾರ್ಯ ನಡೆವ ದೃಶ್ಯವನ್ನು ಚಿತ್ರೀಕರಿಸಿರುವ ಸಾರ್ವಜನಿಕರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಳಾ ಸಿಬ್ಬಂದಿ ಬಸ್ನಿಲ್ದಾಣದಲ್ಲಿರುವ ಹೊಂಡಕ್ಕೆ ಜಲ್ಲಿ ತುಂಬಿಸುವ ದೃಶ್ಯವೂ ಅದರಲ್ಲಿದೆ. ವಿಡಿಯೊ ಚಿತ್ರೀಕರಿಸಿರುವುದನ್ನು ತಿಳಿದುಕೊಂಡ ಅಧಿಕಾರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿದ್ದಾರೆ. ಮಾಧ್ಯಮದ ಮುಂದೆ ಈ ಬಗ್ಗೆ ವಿವರ ನೀಡಲೂ ಮಹಿಳಾ ಸಿಬ್ಬಂದಿ ನಿರಾಕರಿಸಿದರು.
ಘಟಕದಲ್ಲಿ ಪಕ್ಷಪಾತ ಧೋರಣೆ ಇದೆ ಎಂದು ಹೆಸರು ಹೇಳಲಿಚ್ಛಿಸದ ಚಾಲಕರೊಬ್ಬರು ದೂರಿದರು.
ಈ ಬಗ್ಗೆ ಘಟಕ ವ್ಯವಸ್ಥಾಪಕಿ ಶಾಜಿಯಾ ಅವರ ಗಮನ ಸೆಳೆದಾಗ ‘ಮಹಿಳಾ ಸಿಬ್ಬಂದಿ ಸ್ವಚ್ಛತಾ ಕೆಲಸ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ’ ಎಂದರು.
ಸಂಸ್ಥೆಯ ನಿಗದಿತ ಕೆಲಸ ಮಾಡುವುದರಲ್ಲೇ ಸುಸ್ತಾಗುವ ಮಹಿಳಾ ಸಿಬ್ಬಂದಿ ಅವರದ್ದಲ್ಲದ ಕೆಲಸವನ್ನು ಹುಡುಕಿಕೊಂಡು ಮಾಡುತ್ತಾರ ಎಂದಿರುವ ಸಾರ್ವಜನಿರು ಈ ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.