ಹಾಸನ: ‘ಪಡುವಲಹಿಪ್ಪೆಯಲ್ಲಿ ಅಕ್ರಮ ಮತದಾನ ನಡೆದಿಲ್ಲ ಹಾಗೂ ಬಿಜೆಪಿ ಆಧಾರ ರಹಿತ ಆರೋಪ ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸಿದರೆ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ’ ಎಂದು ಶಾಸಕ ಪ್ರೀತಂ ಗೌಡ ಸವಾಲು ಹಾಕಿದರು.
‘ಯಾರ ಕುಮ್ಮಕ್ಕಿನಿಂದ ಅಕ್ರಮ ಮತದಾನ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕುರಿತು ತನಿಖೆಯಾಗಬೇಕು. ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಮತಗಟ್ಟೆ ಸಂಖ್ಯೆ 244ರಲ್ಲಿ ಅಕ್ರಮ ಮತದಾನವಾಗಿರುವುದು ಸಾಬೀತಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಅಕ್ರಮ ಮತದಾನ ಪ್ರಕರಣದ ಪ್ರಮುಖ ಆರೋಪಿ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದರು.
‘ಅರ್ಧ ಗಂಟೆಯಲ್ಲಿ ಒಬ್ಬ ವ್ಯಕ್ತಿ ಎರಡು ಬಾರಿ ಮತದಾನ ಮಾಡಲು ಪ್ರೇರೇಪಿಸಿದ್ದಾರೆ. ಆ ಸ್ಥಳದಲ್ಲಿ ನಿಂತು ಪ್ರಭಾವ ಬೀರಿದ್ದಾರೆ. ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ’ ಎಂದು ಪರೋಕ್ಷವಾಗಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಚುನಾವಣಾ ಆಯೋಗ ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
‘ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಪ್ರಜಾಪ್ರಭುತ್ವ ರಕ್ಷಣೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯ ಜರನ್ನು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
‘ದೇವೇಗೌಡರಂತಹ ಪ್ರಬುದ್ಧ, ಸಭ್ಯ ರಾಜಕಾರಣಿ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಆದರೆ ಅವರ ಊರಿನಲ್ಲಿಯೇ ಈ ರೀತಿಯ ಘಟನೆ ನಡೆದಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಇದು 1970 ಹಾಗೂ 1990ರ ರಾಜಕಾರಣವಲ್ಲ. ದಬ್ಬಾಳಿಕೆಗೆ ಅವಕಾಶ ಇಲ್ಲ’ ಎಂದು ತಿರುಗೇಟು ನೀಡಿದರು.
‘ನನ್ನನ್ನು ಆಕಸ್ಮಿಕ ಹಾಗೂ ಲಾಟರಿ ಶಾಸಕನೆಂದು ಜರಿದಿರುವ ಸಚಿವ ರೇವಣ್ಣ, ಇಷ್ಟು ವರ್ಷ ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಅಧಿಕಾರ ದಾಹದಿಂದ ಹೀಗೆಲ್ಲ ಮಾಡುತ್ತಿದ್ದಾರೆ. ಕಾಲ ಚಕ್ರ ಉರುಳುತ್ತದೆ ಎಂಬುದನ್ನು ಅವರು ಮರೆಯಬಾರದು’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.