
ಹಾಸನ: ‘ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದಾಖಲೆಗಳಿಲ್ಲ ಎಂಬ ಆರೋಪಗಳು ಹೆಚ್ಚಾಗುತ್ತಿದ್ದರಿಂದ ನನ್ನಲ್ಲಿರುವ ಎಲ್ಲ ಮೂಲ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ್ದೇನೆ’ ಎಂದು ಯಶ್ ತಾಯಿ ಪುಷ್ಪಾ ಅರುಣ್ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ದಾಖಲೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಾಖಲೆ ಇಲ್ಲ ಎನ್ನುವ ಮಾತುಗಳು ನಿರಂತರವಾಗಿ ಕೇಳಿ ಬರುತ್ತಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಇದುವರೆಗೂ ಮೌನವಾಗಿದ್ದೆ. ಆದರೆ ಇಂದು ಜಿಲ್ಲಾಧಿಕಾರಿ ಕಚೇರಿಗೆ ಬಂದು, ನನ್ನ ಬಳಿ ಇರುವ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ’ ಎಂದರು.
‘ಯಶ್ ಅವರ ತಾಯಿ ಎಂಬ ಕಾರಣಕ್ಕೆ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ. ನನ್ನ ಎಲ್ಲ ದಾಖಲೆಗಳು ಸರಿಯಾಗಿವೆ. ಅವರ ದಾಖಲೆಗಳನ್ನೂ ಪರಿಶೀಲಿಸಲಿ. ಈ ವಿಷಯ ಈಗಾಗಲೇ ನ್ಯಾಯಾಲಯದ ವಿಚಾರಣೆಯಲ್ಲಿದೆ. ಈವರೆಗೆ ಒಂದು ದಿನವೂ ಸಂಧಾನ ಅಥವಾ ಮಾತುಕತೆಗೆ ಅವರು ಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ದಾಖಲೆಗಳಿಲ್ಲದೆ ಏಕಾಏಕಿ ಮನೆಯ ಕಾಂಪೌಂಡ್ ಒಡೆದಿದ್ದಾರೆ. ಈ ಹಿಂದೆ ಕೂಡ ದೇವರಾಜು ಅವರ ಭಾವ ನಟರಾಜು ಅವರು ನಕಲಿ ದಾಖಲೆಗಳನ್ನು ಮಾಡಿದ್ದಾರೆ ಎಂದು ಹೇಳಿದ್ದೇನೆ. ಅವರ ಬಳಿ ದಾಖಲೆಗಳಿವೆ ಎಂದರೆ ಸಾಬೀತುಪಡಿಸಲಿ. ನಮ್ಮದು ಎಲ್ಲವೂ ಕ್ಲಿಯರ್ ದಾಖಲೆಗಳಾಗಿವೆ’ ಎಂದು ಸ್ಪಷ್ಟಪಡಿಸಿದರು.
‘ನಕಲಿ ದಾಖಲೆ ಯಾರು ಮಾಡಿದ್ದಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸರ್ಕಾರಿ ಕಚೇರಿಯಲ್ಲಿರುವ ಯಾರೋ ಮಾಡಿದ ತಪ್ಪಿನಿಂದ ಈ ಗೊಂದಲ ಉಂಟಾಗಿದೆ. ಅವರ ದಾಖಲೆಗಳು ನಕಲಿ. ನಮ್ಮದು ಅಸಲಿ. ದಾಖಲೆಗಳು ನಮ್ಮ ತಂದೆ ಹೆಸರಲ್ಲಿ ಇಲ್ಲ, ನನ್ನ ಹೆಸರಲ್ಲಿ ಇವೆ. ಹಾಗಿದ್ದರೂ ಪುಷ್ಪಾ ಅರುಣ್ ಕುಮಾರ್ ಹೆಸರಿಗೆ ನೋಟಿಸ್ ನೀಡದಿರುವುದೇಕೆ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.