ADVERTISEMENT

ಹಾಸನದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂಅಕ್ರಮ: ತನಿಖೆಗೆ ಎಸ್ಐಟಿ ರಚಿಸಲು ಆಗ್ರಹ

ಶಾಸಕ ಎಚ್‌.ಡಿ. ರೇವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 6:33 IST
Last Updated 4 ಡಿಸೆಂಬರ್ 2025, 6:33 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: 'ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಭೂ ಅವ್ಯವಹಾರ ನಡೆದಿದ್ದು, ಸರ್ಕಾರ ಕೂಡಲೇ ಇದನ್ನು ಎಸ್ಐಟಿ ತನಿಖೆಗೆ ವಹಿಸಬೇಕು’ ಎಂದು ಶಾಸಕ ಎಚ್.ಡಿ. ರೇವಣ್ಣ ಒತ್ತಾಯಿಸಿದರು.

 ಸುದ್ದಿಗಾರರೊಂದಿಗೆ ಬುಧವಾರ ಇಲ್ಲಿ ಮಾತನಾಡಿದ ಅವರು, ನಗರದಲ್ಲಿ ಅಕ್ರಮ ಲೇ ಔಟ್ ಸೇರಿದಂತೆ ಇತರೆ ಭೂ ಅಕ್ರಮದ ಕುರಿತು ಫೆಬ್ರುವರಿಯಲ್ಲಿಯೇ ಕಂದಾಯ ಸಚಿವರಿಗೆ ನಾನು, ಶಾಸಕರಾದ ಎ. ಮಂಜು, ಸ್ವರೂಪ್ ಪ್ರಕಾಶ್, ಸಿ.ಎನ್. ಬಾಲಕೃಷ್ಣ ಲಿಖಿತವಾಗಿ ದೂರು ನೀಡಿದ್ದೆವು. ಬಳಿಕ ಅಧಿವೇಶನದಲ್ಲಿಯೂ ಚರ್ಚೆ ಮಾಡಲಾಗಿತ್ತು. ಕಂದಾಯ ಸಚಿವ ಕೃಷ್ಣ ಬೈರೇಗೌಡರು ತನಿಖೆಗೆ ಸೂಚನೆ ನೀಡಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಗತ್ಯ ಕ್ರಮ ಕೈಗೊಂಡು ತನಿಖೆ ಮಾಡುವಂತೆ ತಿಳಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಸ್ಥಳೀಯ ಅಧಿಕಾರಿಗಳನ್ನು ಒಳಗೊಂಡ 3 ತನಿಖಾ ತಂಡ ರಚಿಸಲಾಗಿತ್ತು. ಆ ತನಿಖಾ ತಂಡ ಯಾವುದೇ ವರದಿ ನೀಡಿಲ್ಲ;  ಪ್ರಕರಣವನ್ನು ಇದುವರೆಗೂ ವಿಲೇವಾರಿ ಮಾಡಿಲ್ಲ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ದೊಡ್ಡ ಭೂ ಮಾಫಿಯಾ ಇದರಲ್ಲಿ ಅಡಗಿದೆ’ ಎಂದು ಆರೋಪ ಮಾಡಿದರು.

ADVERTISEMENT

‘ಹಾಸನ ಹೊರವಲಯದ ಚಿಕ್ಕಕೊಂಡಗೋಳ ಗ್ರಾಮದಲ್ಲಿ 97 ಜನರಿಗೆ 73 ಎಕರೆ ಅಕ್ರಮ ಮಂಜೂರಾತಿ ನೀಡಲಾಗಿದೆ. ಇದರಲ್ಲಿ ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ವಂಚನೆ ನಡೆದಿದೆ.  ಎಸ್ಐಟಿ ರಚನೆ ಮಾಡಿ ತನಿಖೆ ಮಾಡುವಂತೆ’ ಒತ್ತಾಯಿಸಿದರು.

‘ಈ ಪ್ರಕರಣದಲ್ಲಿ 40 ವರ್ಷಗಳಿಂದ ಯಾವ ಭೂ ಮಂಜೂರಾತಿದಾರರ ಸ್ವಾಧೀನಕ್ಕೆ ಬಂದಿಲ್ಲ. 2023ರಲ್ಲಿ ಏಕಾಏಕಿ ಇವರಿಗೆ ಕಾಯಂ ಸಾಗುವಳಿ ಚೀಟಿ ನೀಡಲಾಗಿದೆ. ಇದೀಗ ಕೆಲವೇ ದಿನದಲ್ಲಿ ಈ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗುತ್ತಿದ್ದು, ಈ ಪ್ರದೇಶದಲ್ಲಿ ರಾಜಕಾಲುವೆ ಮುಚ್ಚಿ ರಸ್ತೆ ಮಾಡಲಾಗಿದೆ.   ಸ್ಥಳೀಯ ಎಡಿಎಲ್‌ಆರ್, ರಾಜಕಾಲುವೆ ಇರುವ ಬಗ್ಗೆ ಸರ್ವೇ ನಡೆಸಿ, ವರದಿ ಸಹ ನೀಡಿದ್ದಾರೆ’ ಎಂದು ತಿಳಿಸಿದರು.

ರಾಜಕೀಯ ಯಾರಿಗೂ ಶಾಶ್ವತವಲ್ಲ. ಜಿಲ್ಲೆಗೆ ಐಐಟಿ, ಕೇಂದ್ರ ವಿಶ್ವವಿದ್ಯಾಲಯ ಸೇರಿದಂತೆ ಇತರೆ ಯೋಜನೆಗಳು ಬರದಂತೆ ಮಾಡಿದರು. ವಿಮಾನ ನಿಲ್ದಾಣ ಕಾಮಗಾರಿಯೂ ಬೇಕಾಬಿಟ್ಟಿಯಾಗಿ ನಡೆಯುತ್ತಿದೆ ಎಂದು ರೇವಣ್ಣ ಆರೋಪಿಸಿದರು.

ಡಿಸೆಂಬರ್ 6 ರಂದು ಮುಖ್ಯಮಂತ್ರಿ ಹಾಸನಕ್ಕೆ ಬರುತ್ತಿದ್ದು, ಕನಿಷ್ಠ ಪಾಲಿಕೆ ಅಭಿವೃದ್ಧಿಗೆ ₹ 100 ಕೋಟಿಯನ್ನಾದರೂ ಬಿಡುಗಡೆ ಮಾಡಲಿ. ಮಹಾನಗರ ಪಾಲಿಕೆಗೆ ಹಣ ಬಿಡುಗಡೆ ಮಾಡಿರುವಂತೆ ಹಾಸನಕ್ಕೂ ಅನುದಾನ ನೀಡಲಿ ಎಂದು ಆಗ್ರಹಿಸಿದರು.

ಶಾಸಕ ಸಿ.ಎನ್ ಬಾಲಕೃಷ್ಣ ಮಾತನಾಡಿ, ‘ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಸರ್ಕಾರಿ ಆಸ್ತಿ ಕಬಳಿಕೆ ಆಗದಂತೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಅಗ್ರಹಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಸಂದಿದೆ. ಆದರೆ ಶಾಸಕರಿಗೆ ಅನುದಾನ ನೀಡುವಲ್ಲಿ ಆಡಳಿತ, ಪ್ರತಿಪಕ್ಷ ಎಂಬ ತಾರತಮ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮ ಕ್ಷೇತ್ರಗಳಿಗೆ ಅನುದಾನ ಕೊರತೆಯಿಂದಾಗಿ ರಸ್ತೆಗಳು ದುಸ್ಥಿತಿಗೆ ತಲುಪಿದೆ. ಈ ಹಿಂದೆ ಆದ ಕೆಲಸಗಳಿಗೆ ಹಣ ಬಿಡುಗಡೆಯಾಗಿಲ್ಲ.  ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ತಾರತಮ್ಯ ಅನುಸರಿಸುವುದು ಬೇಡ. ಡಿಸೆಂಬರ್ 6 ರಂದು ನಡೆಯುವ ಸಮಾರಂಭದಲ್ಲಿ ಭಾಗವಹಿಸುತ್ತೇನೆ. ಇದೇ ವೇದಿಕೆಯಲ್ಲಿ ಅನುದಾನದ ಕುರಿತು ಕೋರಿಕೆ ಸಲ್ಲಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.