ADVERTISEMENT

ಎಂಜಿನಿಯರ್ ವರ್ಗಾವಣೆಗೆ ವಿಶ್ವನಾಥ್ ಬರೆದ ಪತ್ರ ವೈರಲ್: ವ್ಯಾಪಕ ಟೀಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 15:00 IST
Last Updated 15 ಸೆಪ್ಟೆಂಬರ್ 2019, 15:00 IST
15ಎಆರ್ ಕೆ 1 : ಅರಕಲಗೂಡು ಪಪಂ ಕಿರಿಯ ಇಂಜಿನಿಯರ್ ವರ್ಗಾವಣೆ ಕುರಿತು ಎಚ್. ವಿಶ್ವನಾಥ್ ಮುಖ್ಯಮಂತ್ರಿ ಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರ .
15ಎಆರ್ ಕೆ 1 : ಅರಕಲಗೂಡು ಪಪಂ ಕಿರಿಯ ಇಂಜಿನಿಯರ್ ವರ್ಗಾವಣೆ ಕುರಿತು ಎಚ್. ವಿಶ್ವನಾಥ್ ಮುಖ್ಯಮಂತ್ರಿ ಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರ .   

ಅರಕಲಗೂಡು: ಇಲ್ಲಿಯ ಪಟ್ಟಣ ಪಂಚಾಯಿತಿ ಕಿರಿಯ ಎಂಜಿನಿಯರ್ ಕೆ.ಆರ್. ಕವಿತಾ ಅವರ ತಡೆಹಿಡಿದಿರುವ ವರ್ಗಾವಣೆ ಆದೇಶವನ್ನು ತೆರವುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹುಣಸೂರಿನ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.

‘ಜುಲೈ 23ರ ಉಲ್ಲೇಖದಂತೆ ಪಟ್ಟಣ ಪಂಚಾಯಿತಿ ಎಂಜಿನಿಯರ್ ಕವಿತಾ ಅವರನ್ನು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಪುರಸಭೆಗೆ ವರ್ಗಾವಣೆಗೊಳಿಸಿದ್ದು ಈ ಆದೇಶವನ್ನು ತಡೆಹಿಡಿಯಲಾಗಿದೆ. ಅಂಕೋಲಾದಲ್ಲಿ ಅತಿವೃಷ್ಟಿಯಿಂದ ಸಾರ್ವಜನಿಕ ರಸ್ತೆ, ಚರಂಡಿ ಇನ್ನಿತರ ಅವಶ್ಯಕ ಕಾಮಗಾರಿಗಳು ದುರಸ್ತಿಯಲ್ಲಿದ್ದು ಕೂಡಲೇ ಅವುಗಳನ್ನು ಸರಿಪಡಿಸಲು ಇವರ ಸೇವೆ ಅವಶ್ಯಕವಾಗಿದೆ. ಹಾಗಾಗಿ ತಡೆಹಿಡಿದಿರುವ ಆದೇಶವನ್ನು ತೆರವು ಗೊಳಿಸಿ ಇವರನ್ನು ಅಲ್ಲಿಗೆ ನಿಯೋಜನೆಗೊಳಿಸಬೇಕು’ ಎಂದು ಪತ್ರದಲ್ಲಿ ಹೇಳಲಾಗಿದೆ.

ಅನ್ಯ ಕ್ಷೇತ್ರದ ಶಾಸಕರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರೂ ಸ್ಥಳಿಯ ಶಾಸಕ ಎ.ಟಿ. ರಾಮಸ್ವಾಮಿ ಮೌನ ವಹಿಸಿರುವುದು ಏಕೆ?. ಕ್ಷೇತ್ರಕ್ಕೆ ವಿಶ್ವನಾಥ್ ಶಾಸಕರೋ ಅಥವಾ ನೀವೊ ? ನಿಮ್ಮ ಕ್ಷೇತ್ರದ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಬೇರೊಂದು ಕ್ಷೇತ್ರದ ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ನೀವು ಮೌನ ವಹಿಸಿರಲು ಕಾರಣವಾದರೂ ಏನು ಎಂದು ಎಂದು ಟೀಕೆಗಳು ವ್ಯಕ್ತವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.