ಹಾಸನ: ನಗರದಲ್ಲಿ ಶನಿವಾರ ಹುಚ್ಚು ನಾಯಿ ಕಡಿತದಿಂದ ಮೂರು ವರ್ಷದ ಮಗು ಸೇರಿ ಹದಿನೈದು ಮಂದಿ ಗಾಯಗೊಂಡಿದ್ದಾರೆ.
ಐದನೇ ವಾರ್ಡ್ ವ್ಯಾಪ್ತಿಯ ಕುವೆಂಪುನಗರದ ರಸ್ತೆಯಲ್ಲಿ ಜನರು ನಡೆದು ಹೋಗುತ್ತಿದ್ದ ವೇಳೆ ದಿಢೀರನೆ ಪ್ರತ್ಯಕ್ಷವಾದ ನಾಯಿ ಮಗು ಸೇರಿದಂತೆ ಹಲವರಿಗೆ ಕಚ್ಚಿದೆ. ನಂತರ ಕೆ.ಆರ್.ಪುರಂ ಗೆ ತೆರಳಿದ ನಾಯಿ ಅಲ್ಲಿ ಕೂಡ ಹಲವಾರು ಮಂದಿಯನ್ನು ಕಚ್ಚಿ ಗಾಯಗೊಳಿಸಿದೆ.
ಇದೇ ವೇಳೆ ಗಂಭೀರವಾಗಿ ಗಾಯಗೊಂಡ ಮೂರು ವರ್ಷದ ಬಾಲಕನಿಗೆ ಹಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗಿದೆ. ಹಲವರ ಮುಖ, ಬೆನ್ನು, ತೊಡೆ, ಕೈ, ಮುಖದ ಭಾಗ ಕಚ್ಚಿದೆ. ಗಾಯಾಳುಗಳು ಜಿಲ್ಲಾಸ್ಪತ್ರೆಹಾಗೂ ಖಾಸಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದರು.
ಹಲವಾರು ಮಂದಿಯನ್ನು ಕಚ್ಚಿ ಗಾಯಗೊಳಿಸಿದ್ದರಿಂದ ಸ್ಥಳೀಯರು ಸೇರಿ ನಾಯಿಯನ್ನು ಹೊಡೆದುಸಾಯಿಸಿದ್ದಾರೆ.
ಬಿಡಾಡಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯ ಪಡಬೇಕಾದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಅಂದಾಜು ಮೂರು ಸಾವಿರಕ್ಕೂ ಅಧಿಕ ಬಿಡಾಡಿ ನಾಯಿಗಳಿವೆ.
‘ಬಿಡಾಡಿ ನಾಯಿಗಳ ಸೆರೆ ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಟೆಂಡರ್ ಆಗಿದ್ದು, ಕಾರ್ಯಾದೇಶ
ನೀಡುವುದು ಬಾಕಿ ಇದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು
ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ತಿಳಿಸಿದರು.
ನಗರಸಭೆ ಮೂರನೇ ವಾರ್ಡ್ ಸದಸ್ಯ ದಯಾನಂದ ಮಾತನಾಡಿ, ‘ರಾಜ್ಯದಲ್ಲಿಯೇ ಬಿಡಾಡಿ ನಾಯಿಗಳ
ಸಮಸ್ಯೆ ಇದೆ. ನಮ್ಮ ವಾರ್ಡ್ ನಾಗರಿಕರು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ. ತಕ್ಷಣ ಸೆರೆ ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.