ಅರಕಲಗೂಡು: ತಾಲ್ಲೂಕು ಮಡಿವಾಳ ಸಂಘದಿಂದ ಫೆ. 1ರಂದು ವಚನ ಸಾಹಿತ್ಯ ಸಂರಕ್ಷಕ, ವೀರಗಣಾಚಾರಿ ಮಡಿವಾಳ ಮಾಚಿದೇವರ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಜನಜಾಗೃತಿ ಸಮಾವೇಶವನ್ನು ಪಟ್ಟಣದ ಶಿಕ್ಷಕರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎಚ್. ಎನ್. ಕೇಶವಮೂರ್ತಿ ತಿಳಿಸಿದರು.
ಶಾಸಕ ಎ. ಮಂಜು, ಸಂಸದ ಶ್ರೇಯಸ್ ಎಂ.ಪಟೇಲ್ ಭಾಗವಹಿಸಲಿದ್ದು, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಪ್ರಧಾನ ಭಾಷಣ ಮಾಡುವರು. ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿಯಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಲಹರಿ ತಂಡದವರಿಂದ ವಚನ ಗಾಯನ, ಸಿಂಚನಾ ಅವರಿಂದ ಭರತನಾಟ್ಯ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಬೆಳ್ಳಿ ರಥದಲ್ಲಿ ಮಾಚಿದೇವರ ಪ್ರತಿಮೆಯ ಮೆರವಣಿಗೆ ನಡೆಯಲಿದ್ದು ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮುಖಂಡರಾದ ಎಂ.ಸಿ. ನಾಗರಾಜ್, ಕೃಷ್ಣಶೆಟ್ಟಿ, ಮಂಜುನಾಥ್, ಎ.ಎಸ್. ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಉತ್ಸವ:
ತಾಲ್ಲೂಕಿನ ಮೊಕಳಿ ಗ್ರಾಮದ ಯಶೋಧ ಎಂ.ಸಿ. ನಾಗರಾಜ್ ಕುಟುಂಬದವರು ₹1.35 ಲಕ್ಷ ವೆಚ್ಚದಲ್ಲಿ ಮಡಿವಾಳ ಮಾಚಿದೇವರ ಕಂಚಿನ ಪ್ರತಿಮೆ ಮಾಡಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ನೂತನ ಪ್ರತಿಮೆಗೆ ಗ್ರಾಮದೇವತೆ ದೊಡ್ಡಮ್ಮ ದೇವಾಲಯದಲ್ಲಿ ಬುಧವಾರ ಪ್ರಾಣಪ್ರತಿಷ್ಠಾಪನೆ ನಡೆಸಿ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ಸಮುದಾಯದ ಮುಖಂಡರು ಮಹಿಳೆಯರು ಉತ್ಸವದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.