ಸಕಲೇಶಪುರ: ತಾಲ್ಲೂಕಿನ ಅಚ್ಚನಹಳ್ಳಿ- ಮಗಜಹಳ್ಳಿ ಜಲಪಾತದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ. ಕುಮಾರಸ್ವಾಮಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘₹30 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ, ಬೆಲೆ ಕುಸಿತದಂತಹ ಸಮಸ್ಯೆಗಳಿಂದ ತಾಲ್ಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ಇಲ್ಲಿಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೆಪ್ರವಾಸೋದ್ಯಮ ಅಭಿವೃದ್ಧಿ ಬಿಟ್ಟರೆ ಯಾವುದೇ ಮಾರ್ಗವಿಲ್ಲ. ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯ ಒದಗಿಸಬೇಕಿದೆ. ತಾಲ್ಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿ ಸಂಬಂಧ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ’ ಎಂದರು.
ಮಲೆನಾಡಿನ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಂಡು ಮನೋಲ್ಲಾಸಕ್ಕಾಗಿ ಪ್ರತಿ ವಾರ 5 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ತಾಲ್ಲೂಕಿನಲ್ಲಿರುವ ಸ್ಮಾರಕಗಳು, ಬೆಟ್ಟ, ಗುಡ್ಡ, ಝರಿ, ಜಲಪಾತಗಳನ್ನು ನೋಡುವುದಕ್ಕಾಗಿ ಗೋಪುಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಮಂಜ್ರಾಬಾದ್ ಕೋಟೆ ಅಭಿವೃದ್ಧಿಗೆ ₹3 ಕೋಟಿ, ದೇವಾಲದಕೆರೆ ಬಳಿ ಬಿಳಿಸಾರೆ ಪಾಲ್ಸ್ ಅಭಿವೃದ್ಧಿಗೆ ₹75 ಲಕ್ಷ, ಬೆಟ್ಟದ ಬೈರವೇಶ್ವರ ದೇವಸ್ಥಾನ ರಸ್ತೆ ಮತ್ತು ವೀಕ್ಷಣಾ ಗೋಪುರ ಅಭಿವೃದ್ಧಿಗೆ ₹1.50 ಕೋಟಿ, ಅತ್ತಿಹಳ್ಳಿ ಸಮೀಪದ ಮೂಕನಮನೆ ಫಾಲ್ಸ್ ಅಭಿವೃದ್ಧಿಗೆ ₹30 ಲಕ್ಷ ಬಿಡುಗಡೆಯಾಗಿದೆ ಎಂದು ಹೇಳಿದರು.ಹಾನುಬಾಳು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಬಿ.ರಾಜೀವ್, ಜಿ.ಪಂ. ಮಾಜಿ ಸದಸ್ಯ ಕೆ.ಎಸ್. ಕುಮಾರಸ್ವಾಮಿ, ಗ್ರಾಮದ ಮುಖಂಡರಾದ ಎ.ಕೆ.ಸಚ್ಚಿದೇವ್, ಅ.ಸಿ. ಮೋಹನ್ ಹಾಗೂ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.