ಹಾಸನ: ಜಾನಪದದಲ್ಲಿ ಇರುವಂತಹ ಜೀವಂತಿಕೆಯನ್ನು ಉಳಿಸಿ, ಬೆಳಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ಗೌಡ ಹೇಳಿದರು.
ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಏರ್ಪಡಿಸಿದ್ದ ಜನಪರ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲಾ, ಕಾಲೇಜುಗಳಲ್ಲಿ ಜಾನಪದ ಕಲೆ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಎಲ್ಲಾ ಜನರನ್ನು ಒಗಟ್ಟಿನಲ್ಲಿ ಕೊಂಡೊಯ್ಯುವ ಜನಪದರು ತಮ್ಮದೇ ಆದ ಶಕ್ತಿ ಹೊಂದಿದ್ದು,ಕಲೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಚ್.ವಿ.ಮಂಜುನಾಥ್ ಮಾತನಾಡಿ, ಸಂಸ್ಕೃತಿ, ಆಚಾರ-ವಿಚಾರ, ಕಲೆ ಒಳಗೊಂಡಂತಹ ಬಹು ಸಂಸ್ಕೃತಿಯ ದೇಶ ಭಾರತ. ಪ್ರಾಚೀನ ಕಾಲದಿಂದ ಬಂದಂತಹ ಜಾನಪದ ಕಲೆ ದೇಶದ ಸಂಸ್ಕೃತಿಯ ಪ್ರತೀಕ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಿ.ಸಂಪತ್ ಕುಮಾರ್ ಮತ್ತು ತಂಡ (ಭಕ್ತಿಗೀತೆ ), ಎಚ್.ಎಸ್.ಮಂಜುನಾಥ್ ಮತ್ತು ತಂಡ (ಭಾವಗೀತೆ), ಯೋಗೇಂದ್ರ ದುದ್ದ ಮತ್ತು ತಂಡ (ತತ್ವಪದ ಗಾಯನ), ದೇವರಾಜು ಮತ್ತು ತಂಡ (ಗೀಗೀ ಪದ), ಎಂ.ಎನ್.ಲೋಕೇಶ್ ಮತ್ತು ತಂಡ (ಜಾನಪದ ಗಾಯನ), ಕುಮಾರ್ ಕಟ್ಟೆಬೆಳಗುಳಿ ಮತ್ತು ತಂಡ (ಸುಗಮ ಸಂಗೀತ), ಜಯಮ್ಮ ಮತ್ತು ತಂಡ (ಸೋಬಾನೆ ಪದ), ಕುಮಾರಯ್ಯ ಮತ್ತು ತಂಡ (ಚಿಟ್ಟಿಮೇಳ), ದಿನೇಶ್ ಮತ್ತು ತಂಡ (ಪೂಜಾ ಕುಣಿತ), ಮಂಜುನಾಥ್ ಮತ್ತು ತಂಡ (ನಗಾರಿ), ವಾಸುದೇವ್ ಮತ್ತು ತಂಡ (ಚಂಡೆ ವಾದನ), ಶಂಕರಯ್ಯ ಮತ್ತು ತಂಡ (ಸೋಮನ ಕುಣಿತ) ಹಾಗೂ ಶೃತಿ ಮತ್ತು ತಂಡದವರು ಪ್ರದರ್ಶಿಸಿದ ವೀರಗಾಸೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಈ. ಕೃಷ್ಣೆಗೌಡ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಸಣ್ಣ ಕೈಗಾರಿಕೆಗಳಸಂಘದ ಅಧ್ಯಕ್ಷ ಜೆ.ಒ. ಮಹಾಂತಪ್ಪ, ಕಲಾವಿದ ಗ್ಯಾರಂಟಿ ರಾಮಣ್ಣ ಹಾಜರಿದ್ದರು.
ಉತ್ತಮ ಕಲಾ ಪ್ರದರ್ಶನ ನೀಡಿದ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.