ADVERTISEMENT

ಹಾಸನ | ಆರೋಗ್ಯಕ್ಕಾಗಿ ಸಮಯ ಮೀಸಲಿಡಿ: ಪೂರ್ಣಿಮಾ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 1:39 IST
Last Updated 3 ಆಗಸ್ಟ್ 2025, 1:39 IST
ಹಾಸನದಲ್ಲಿ ಸೋಮವಾರ ರಾತ್ರಿ ಮೊಬೈಲ್‌ ಲೈಟ್‌ ಅಭಿಯಾನ ನಡೆಯಿತು.
ಹಾಸನದಲ್ಲಿ ಸೋಮವಾರ ರಾತ್ರಿ ಮೊಬೈಲ್‌ ಲೈಟ್‌ ಅಭಿಯಾನ ನಡೆಯಿತು.   

ಹಾಸನ: ಪ್ರತಿಯೊಬ್ಬರು ಆರೋಗ್ಯಕ್ಕಾಗಿ ಪ್ರತಿ ದಿನ 45 ನಿಮಿಷ ನಡಿಗೆ, 20 ನಿಮಿಷ ಯೋಗಾಭ್ಯಾಸ ಅಥವಾ ವ್ಯಾಯಾಮ ಮಾಡಬೇಕು. ಜನರು ಜೀವನಶೈಲಿ ಹಾಗೂ ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ತಿಳಿಸಿದರು.

ಹೃದಯ ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಹೇಮಾವತಿ ಪ್ರತಿಮೆಯ ಬಳಿ ಮೊಬೈಲ್ ಲೈಟ್ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ದಿನದ ಅರಿವು ಕಾರ್ಯಕ್ರಮ ಆಗಬಾರದು. ಪ್ರತಿ ದಿನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲೆಯ ಒಂದರಿಂದ ಹತ್ತನೇ ತರಗತಿಯಲ್ಲಿ 1.90 ಲಕ್ಷ ಮಕ್ಕಳಲ್ಲಿ, 1 ಲಕ್ಷ ಮಕ್ಕಳಿಗೆ ಈಗಾಗಲೇ ತಪಾಸಣೆ ಮಾಡಲಾಗಿದೆ ಎಂದರು.

ADVERTISEMENT

ಆಧುನಿಕ ಜೀವನ ಶೈಲಿಯಲ್ಲಿ ಹೃದಯ ಆರೋಗ್ಯದ ಕಡೆ ಗಮನಹರಿಸಬೇಕಿದೆ. ರಾಜ್ಯ ಸರ್ಕಾರ ಗೃಹ ಆರೋಗ್ಯ ಕಾರ್ಯಕ್ರಮದಡಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಅವಶ್ಯಕವಿರುವ ಚಿಕಿತ್ಸೆ, ಮಾತ್ರೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ಯುವ ಜನತೆಯಲ್ಲಿ ಹೃದಯಾಘಾತದಿಂದ ಮರಣ ಹೊಂದುತ್ತಿರುವುದು ಕಂಡುಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯುವ ಪೀಳಿಗೆ ಮನೆಯಲ್ಲಿ ತಯಾರಿಸುವ ಆಹಾರ ಸೇವನೆ ಮಾಡುವುದಕ್ಕೆ ಆದ್ಯತೆ ನೀಡಿ, ಜೊತೆಗೆ ಮೊಬೈಲ್ ಅನ್ನು ಮಿತವಾಗಿ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಿ. ವಯಸ್ಸಾದ ನಾಗರಿಕರು ಕೂಡ ತಾವು ಸೇವಿಸುವ ಆಹಾರದ ಬಗ್ಗೆ ಗಮನಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್ ಕುಮಾರ್, ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ಲಯನ್ಸ್, ರೋಟರಿ ರೆಡ್ ಕ್ರಾಸ್, ಎಸ್‌ಡಿಎಂ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್, ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.