ಹಾಸನ: ರಾಜ್ಯದಲ್ಲಾಗಲೀ, ದೇಶದಲ್ಲಾಗಲೀ ತುರ್ತು ಪರಿಸ್ಥಿತಿ ಹೇರುವ ಪರಿಸ್ಥಿತಿ ಬಂದಿಲ್ಲ ಎಂದು ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೇವಣ್ಣ ಅವರಿಗೆ ಏಕೆ ಹಾಗೆ ಅನ್ನಿಸಿದೆಯೋ ಗೊತ್ತಿಲ್ಲ. ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ ಚೆನ್ನಾಗಿಯೇ ಇದೆ’ ಎನ್ನುವ ಮೂಲಕ ಬಿಜೆಪಿ ಸರ್ಕಾರ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದೆ ಎಂದು ಹೇಳಿಕೆ ನೀಡಿದ್ದ ರೇವಣ್ಣಗೆ ತಿರುಗೇಟು ನೀಡಿದರು.
ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಗಳಿಗೆ ಪರಿಹಾರ ಹಿಂತೆಗೆತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಅವರು ಪರಿಹಾರವನ್ನೇ ಘೋಷಣೆ ಮಾಡಿಲ್ಲ ಎಂದು ಹೇಳಿರುವಾಗ ವಾಪಸ್ ತೆಗೆದು ಕೊಳ್ಳುವ ಪ್ರಶ್ನೆ ಎಲ್ಲಿಂದ ಬರುತ್ತೆ' ಎಂದರು.
‘ಮೃತಪಟ್ಟವರು ಅಮಾಯಕರಾದರೆ ಪರಿಹಾರ ನೀಡುವುದಾಗಿ ಸಿ.ಎಂ ಹೇಳಿದ್ದಾರೆ. ಆದರೆ ಅವರೂ ಗಲಭೆಯಲ್ಲಿ ಆರೋಪಿಗಳಾಗಿದ್ದರೆ ಪರಿಹಾರ ಕೊಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಇದೆ’ ಎಂದು ಹೇಳಿದರು.
‘ಮಂಗಳೂರು ಗೋಲಿಬಾರ್ ಪ್ರಕರಣ ಹಿನ್ನೆಲೆಯಲ್ಲಿ ಸರ್ಕಾರ ಪೊಲೀಸರಿಗೆ ಬಹುಮಾನ ಘೋಷಣೆ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದ ಮಾಧುಸ್ವಾಮಿ, ‘ಉತ್ತರ ಪ್ರದೇಶ ಮಾದರಿಯಲ್ಲಿ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದರೆ ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ಸದ್ಯಕ್ಕೆ ನಾವು ಐಪಿಸಿ ಸೆಕ್ಷೆನ್ 2(a) ಗೆ ಬದ್ಧರಾಗಿದ್ದೇವೆ. ಇದರ ಪ್ರಕಾರ ಕ್ರಿಮಿನಲ್ ಕೇಸ್ ಮಾಡುವುದಕ್ಕೆ ಅವಕಾಶ ಇದೆ. ಮುಂದೆ ಸರ್ಕಾರಿ ಆಸ್ತಿ ಪಾಸ್ತಿ ರಕ್ಷಣೆ ಗೆ ಕಾನೂನು ತಿದ್ದುಪಡಿ ಅಗತ್ಯವಾದರೆ ಆ ಬಗ್ಗೆ ಚರ್ಚೆ ನಡೆಯಬೇಕು. ಅದಾದ ಬಳಿಕ ಕಾನೂನು ಜಾರಿಯಾದರೆ ಅದು ಎಲ್ಲರಿಗೂ ಅನ್ವಯಿಸುತ್ತೆ’ ಎಂದರು.
ಮಂಗಳೂರಿನಲ್ಲಿ ನಡೆದ ಪ್ರತಿಯೊಂದು ಘಟನೆಗೂ ವಿಡಿಯೊ ಸಾಕ್ಷಿಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ವರದಿ ಬಂದ ನಂತರ ಮುಂದಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.