ADVERTISEMENT

ಮಸೀದಿಯೂ ಇರಲಿ, ಮಂದಿರವೂ ಇರಲಿ: ವಿಶ್ವೇಶತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 14:51 IST
Last Updated 12 ಮಾರ್ಚ್ 2019, 14:51 IST
ವಿಶ್ವೇಶತೀರ್ಥ ಸ್ವಾಮೀಜಿ
ವಿಶ್ವೇಶತೀರ್ಥ ಸ್ವಾಮೀಜಿ   

ಹಾಸನ: ‘ಹಿಂದೂ-ಮುಸ್ಲಿಂ ಎಂಬ ತಾರತಮ್ಯ ಬೇಡ. ಆದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್‌ ರಚಿಸಿರುವ ಮಧ್ಯಸ್ಥಿಕೆ ಸಮಿತಿಗೆ ಎರಡು ತಿಂಗಳ ಕಾಲಾವಕಾಶವಿದೆ. ಸಮಿತಿಯಲ್ಲಿ ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ ಇರುವುದಕ್ಕೆ ಬೆಂಬಲ ಇದೆ.

ಮುಸ್ಲಿಮ್‌ರಿಗೂ ಅದೇ ಜಾಗದಲ್ಲಿ ಮಸೀದಿ ನಿರ್ಮಿಸಬೇಕು ಎಂದೇನಿಲ್ಲ. ಅಯೋಧ್ಯೆಯಿಂದ ಸ್ವಲ್ಪ ದೂರದಲ್ಲಿ ಇದ್ದರೆ ಒಳ್ಳೆಯದು. ಸಮೀಪವಾದರೆ ಯಾವಾಗಲೂ ಘರ್ಷಣೆಯಾಗುತ್ತದೆ. ಮಸೀದಿಯೂ ಇರಲಿ, ಮಂದಿರವೂ ಇರಲಿ. ಎಲ್ಲರಿಗೂ ಒಪ್ಪಿಗೆ ಆಗುವಂತೆ ಸಂಧಾನ ಆಗಬೇಕು. ಸಮಿತಿ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು. ಆದರೆ, ಸಮಿತಿಯ ಸಂಧಾನದಿಂದ ಅಯೋಧ್ಯೆ ಪರಿಸ್ಥಿತಿ ಬಗೆಯುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದರು.

ADVERTISEMENT

‘ರಾಜಕೀಯವಾಗಿ ಈಗ ಏನು ಮಾತನಾಡುವುದಿಲ್ಲ. ಆದರೆ, ಮತದಾರರು ದೇಶದ ಬಗ್ಗೆ ಕಾಳಜಿ ಇಟ್ಟುಕೊಂಡು ಮತದಾನ ಮಾಡಬೇಕು. ಇಂತಹುದೇ ಪಕ್ಷಕ್ಕೆ ಮತ ಹಾಕಿ ಎಂದು ಹೇಳುವುದಿಲ್ಲ. ಸಮರ್ಥ ನಾಯಕನನ್ನು ಆರಿಸುವ ಹೊಣೆಗಾರಿಕೆ ನಿಮ್ಮದಿರಲಿ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.