ADVERTISEMENT

42 ವರ್ಷದಲ್ಲಿ 32 ಬಾರಿ ಹೇಮಾವತಿ ಒಡಲು ಭರ್ತಿ: ಸಚಿವ ಗೋಪಾಲಯ್ಯ ಹರ್ಷ

ಕೆಆರ್ ಎಸ್ ಮಾದರಿ ಉದ್ಯಾನ: ಸಿಎಂ ಜೊತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 8:00 IST
Last Updated 25 ಜುಲೈ 2022, 8:00 IST
   

ಹಾಸನ: ಜಿಲ್ಲೆಯ ಜೀವನಾಡಿ ಗೊರೂರಿನ ಹೇಮಾವತಿ ಜಲಾಶಯ ಕಳೆದ 42 ವರ್ಷದಲ್ಲಿ 32 ನೇ ಬಾರಿ ಸಂಪೂರ್ಣ ಭರ್ತಿಯಾಗಿದ್ದು, ಜಿಲ್ಲೆಯ ರೈತರು ಹಾಗೂ ಜನರಲ್ಲಿ ಹರ್ಷ ಮೂಡಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ಸೋಮವಾರ ತಾಲ್ಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜಲಾಶಯವು ಮೂರು ವರ್ಷಗಳಿಂದ ಸತತವಾಗಿ ಭರ್ತಿಯಾಗುತ್ತಿದೆ. ಜಲಾಶಯ ನಿರ್ಮಾಣವಾದ ಬಳಿಕ 32 ನೇ ಬಾರಿ ಸಂಪೂರ್ಣ ಭರ್ತಿಯಾಗಿದೆ‌ ಎಂದರು.

ADVERTISEMENT

ಜಲಾಶಯ ಭರ್ತಿಯಾಗಿರುವುದರಿಂದ ಈಗಾಗಲೇ ಹಾಸನ, ಮಂಡ್ಯ, ತುಮಕೂರು, ಮೈಸೂರು ಜಿಲ್ಲೆಗಳಿಗೆ ಹೆಚ್ಚುವರಿ ನೀರನ್ನು ಹರಿಸಲಾಗಿದೆ. ಹಾಸನ ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರನ್ನು ತುಂಬಿಸಲಾಗಿದ್ದು, ಇದರಿಂದ ರೈತರಲ್ಲಿ ಸಂತಸಮನೆ ಮಾಡಿದೆ ಎಂದರು.
ಜಲಾಶಯದ ಮುಂಭಾಗ ಕೆಆರ್‌ಎಸ್‌ ಮಾದರಿಯಲ್ಲಿ ಉದ್ಯಾನ ನಿರ್ಮಾಣ ಕುರಿತು ನೀರಾವರಿ ಹಾಗೂ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದು ಎಂದ ಅವರು, ಕೋವಿಡ್ ನಿಂದಾಗಿ ಎರಡು ವರ್ಷಗಳಿಂದ ಈ ಬಗ್ಗೆ ಪ್ರಸ್ತಾಪ ಆಗಿಲ್ಲ. ಉದ್ಯಾನ ನಿರ್ಮಾಣದಿಂದ ಈ ಭಾಗದಲ್ಲಿ ಆರ್ಥಿಕ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ನೀರಾವರಿ ಸಚಿವರು ದೆಹಲಿ ಪ್ರವಾಸದಲ್ಲಿ ಇರುವುದರಿಂದ ಇಂದು ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ತಿಳಿಸದರು.

ವರದಿ ಬಳಿಕ ತೀರ್ಮಾನ:ಮೈಸೂರಿನ ಕೆಆರ್ ಎಸ್ ಜಲಾಶಯದ ಬಳಿ ಟ್ರಯಲ್ ಬ್ಲಾಸ್ಟಿಂಗ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ವೈಜ್ಞಾನಿಕ ರೀತಿಯಲ್ಲಿ ಟ್ರಯಲ್ ಬ್ಲಾಸ್ಟಿಂಗ್ ಮಾಡಿದರೆ ತಪ್ಪಿಲ್ಲ ಎಂದು ಮಾಹಿತಿ ಇದೆ. ಮತ್ತೆ ಈ ಬಗ್ಗೆ ಪರಿಶೀಲನೆ ನಡೆಸಲು ತಜ್ಞರನ್ನು ನಿಯೋಜಿಸಲಾಗಿದ್ದು, ವರದಿ ಬಂದ ಬಳಿಕ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.
ಸ್ಥಳ ಪರಿಶೀಲನೆ: ಜಿಲ್ಲೆಯ ಆಲೂರು ಭಾಗದಲ್ಲಿನ ಮಂಜಲಗೂಡು ಎತ್ತಿನಹೊಳೆ ನಾಲೆ ತಡೆಗೋಡೆ ಕುಸಿತ ಕುರಿತು ಪ್ರತಿಕ್ರಿಯೆ ನೀಡಿದ ಗೋಪಾಲಯ್ಯ, ಕಳಪೆ ಕಾಮಗಾರಿ ಕುರಿತು ನಮ್ಮ ಗಮನಕ್ಕೆ ಬಂದಿದೆ. ನಾಲೆ ಕುಸಿತ ಪ್ರದೇಶಗಳಿಗೆ ನೀರಾವರಿ ಸಚಿವರೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.