ಅರಕಲಗೂಡು: ‘ವಿದ್ಯೆ ಇಲ್ಲದಿದ್ದರೆ ಬದುಕು ಬಹಳ ಕಷ್ಟಕರ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಹರಿಸಿ ಉನ್ನತ ಸ್ಥಾನದಲ್ಲಿ ತೇರ್ಗಡೆಯಾಗುವ ಕುರಿತು ಹೆಚ್ಚಿನ ಪ್ರಯತ್ನ ಹಾಕಬೇಕು’ ಎಂದು ಶಾಸಕ ಎ. ಮಂಜು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಫಲಿತಾಂಶ ಉತ್ತಮ ಪಡಿಸುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮನೆ, ಹಾಗೂ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರೀಕ್ಷಾ ತಯಾರಿ ಮತ್ತು ಓದಿನ ಕುರಿತು ಪರಿಶೀಲನೆ ನಡೆಸಿದರು. ಅಲ್ಲದೆ, ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
‘ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಕೇವಲ ಪರೀಕ್ಷೆಯಲ್ಲಿ ತೇರ್ಗಡೆಯಾದರಷ್ಟೆ ಸಾಲದು. ಹೆಚ್ಚಿನ ಅಂಕ ಮತ್ತು ಹೆಚ್ಚಿನ ಜ್ಞಾನ ಗಳಿಸಿದಾಗ ಮಾತ್ರ ಉನ್ನತ ಶಿಕ್ಷಣ, ಉದ್ಯೋಗ ಪಡೆದುಕೊಳ್ಳಲು ಸಾಧ್ಯ, ವಿದ್ಯಾರ್ಥಿ ಬದುಕಿನಲ್ಲಿ ಎಸ್ಎಸ್ಎಲ್ಸಿ ಪ್ರಮುಖ ಘಟ್ಟ. ಇಲ್ಲಿ ಹೆಚ್ಚಿನ ಪರಿಶ್ರಮ ವಹಿಸಿ ಉತ್ತಮ ಸಾಧನೆ ಮಾಡಿದಾಗ ಮುಂದಿನ ಉನ್ನತ ಶಿಕ್ಷಣಕ್ಕೆ ನೆರವಾಗಲಿದೆ. ಮನೆಯಲ್ಲಿ ಪೋಷಕರೂ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಗಮನ ಹರಿಸಬೇಕು. ಅವರ ಓದಿಗೆ ಅಗತ್ಯವಾದ ಅನುಕೂಲ ಕಲ್ಪಿಸಬೇಕು. ಶಿಕ್ಷಕರು ಪಾಠದ ಜೊತೆಗೆ ಓದುವ ಕ್ರಮ, ಪರೀಕ್ಷಾ ತಯಾರಿ ಕುರಿತು ತಿಳಿಸಿದ್ದಾರೆ. ಅದನ್ನು ಅನುಸರಿಸಬೇಕು. ವಾರ್ಷಿಕ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಉತ್ತಮ ಫಲಿತಾಂಶ ತರಬೇಕು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮ ಮೂಲಕ ಪ್ರಯತ್ನ ನಡೆಸಿದ್ದು ಇದನ್ನು ಸಾಕಾರಗೊಳಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್ ಫಲಿತಾಂಶ ಹೆಚ್ಚಳಕ್ಕೆ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಸಿ.ಎಸ್.ಬಾಲರಾಜ್, ಅಕ್ಷರ ದಾಸೋಹ ಸಹ ನಿರ್ದೇಶಕ ರಂಗಸ್ವಾಮಿ, ಇಸಿಒ ಯೋಗೇಶ್, ಶಿವಪ್ರಕಾಶ್, ಮುಖ್ಯ ಶಿಕ್ಷಕರಾದ ಬೋರಣ್ಣಗೌಡ, ವೆಂಕಟೇಶ್, ಫಯಾಜ್, ಸಹ ಶಿಕ್ಷಕ ರಾಜೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.