ADVERTISEMENT

ಪಕ್ಷ ವಿರೋಧಿಗಳಿಗೆ ಮಣೆ: ಜೆಡಿಎಸ್ ನಾಯಕರ ವಿರುದ್ಧ ಎ.ಟಿ.ರಾಮಸ್ವಾಮಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 2:57 IST
Last Updated 19 ಸೆಪ್ಟೆಂಬರ್ 2020, 2:57 IST
ಎ.ಟಿ.ರಾಮಸ್ವಾಮಿ
ಎ.ಟಿ.ರಾಮಸ್ವಾಮಿ   

ಅರಕಲಗೂಡು: ‘ಜೆಡಿಎಸ್‌ನಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಮಣೆ ಹಾಕಲಾಗುತ್ತಿದ್ದು, ಇದಕ್ಕೆ ವರಿಷ್ಠರು ಬೆಂಬಲ ನೀಡುತ್ತಿರುವುದು ನೋವಿನ ಸಂಗತಿ’ ಎಂದು ಶಾಸಕ ಎ.ಟಿ.ರಾಮಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹಾಗೂ ಹಾಲು ಒಕ್ಕೂಟದ ನಿರ್ದೇಶಕರೂ ಆಗಿರುವ ಹೊನ್ನವಳ್ಳಿ ಕೆ.ಸತೀಶ್ ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದನ್ನು ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಗಮನಕ್ಕೆ ತರಲಾಗಿತ್ತು. ಆದರೂ ನನ್ನ ಅಭಿಪ್ರಾಯ ಪಡೆಯದೆ ಮೇಲಿನ ಎರಡೂ ಸ್ಥಾನಗಳಿಗೆ ಅವರನ್ನೇ ಪುನರಾಯ್ಕೆ ಮಾಡಲಾಗಿದೆ. ಇದು ಎಚ್.ಡಿ.ರೇವಣ್ಣ ಅವರ ಸರ್ವಾಧಿಕಾರಿ ಮನೋಭಾವ ತೋರಿಸುತ್ತದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ
ಹೇಳಿದರು.

‘ಮಾಜಿ ಸಚಿವ ಕೆ.ಬಿ.ಮಲ್ಲಪ್ಪ ಅವರ ಕಾಲದಿಂದಲೂ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಸತೀಶ್‌ ಕೆಲಸ ಮಾಡಿಲ್ಲ. ಇತ್ತೀಚೆಗೆ ನಡೆದ ನೌಕರರ ಚುನಾವಣೆ ಹಾಗೂ ಒಕ್ಕಲಿಗರ ಸಂಘದ ಚುನಾವಣೆಯಲ್ಲೂ ವಿರೋಧಿ ಗಳೊಂದಿಗೆ ಕೈಜೋಡಿಸಿ ದ್ದಾರೆ. ಗುಂಪುಗಾರಿಕೆ ತಡೆಗಟ್ಟುವುದನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಬೆಂಬಲವಾಗಿ ನಿಂತರೆ ತಾಯಿಯೇ ಮಗುವಿಗೆ ವಿಷ ಉಣಿಸಿದಂತೆ. ವಿಷ ತಿಂದ ಮಗು ಬದುಕಲು ಸಾಧ್ಯವೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಪಕ್ಷದಲ್ಲಿನ ವಿದ್ಯಮಾನಗಳು ಮನಸ್ಸಿಗೆ ತೀವ್ರ ಬೇಸರ ತರಿಸಿದೆ. ಅಧಿವೇಶನದ ಸಮಯದಲ್ಲಿ ನಾಯಕರ ಗಮನಕ್ಕೆ ತರಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.