ADVERTISEMENT

ಚರ್ಚ್‌ ಅಭಿವೃದ್ಧಿ ಹೆಸರಲ್ಲಿ ಹಣ ದುರುಪಯೋಗ

ಎಂಟು ಚರ್ಚ್‌ಗಳಲ್ಲಿ ಭಷ್ಟಾಚಾರ: ತನಿಖೆಗೆ ಫ್ರಾನ್ಸಿಸ್ ಕ್ಸೇವಿಯರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 12:23 IST
Last Updated 31 ಮಾರ್ಚ್ 2021, 12:23 IST
ಫ್ರಾನ್ಸಿಸ್ ಕ್ಸೇವಿಯರ್
ಫ್ರಾನ್ಸಿಸ್ ಕ್ಸೇವಿಯರ್   

ಹಾಸನ: ‘ನಗರದ ಸಂತ ಅಂತೋಣಿ ಚರ್ಚ್ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ
ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ
ಕಾರ್ಯಕರ್ತ ಫ್ರಾನ್ಸಿಸ್ ಕ್ಸೇವಿಯರ್ ಒತ್ತಾಯಿಸಿದರು.

‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಚರ್ಚ್ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹50 ಲಕ್ಷ ಬಿಡುಗಡೆ
ಮಾಡಿದೆ. ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ, ಪಂಚಾಯತ್ ರಾಜ್ ಹಾಸನ ಉಪವಿಭಾಗ ಕಾರ್ಯಪಾಲಕ
ಎಂಜಿನಿಯರ್ ವೆಂಕಟೇಗೌಡ ಹಾಗೂ ಚರ್ಚ್ ಫಾದರ್ ರೊನಾಲ್ಡ್‌ ಕರ್ಡೋಜಾ, ಒಟ್ಟಾಗಿ ಹಣ ದುರುಪಯೋಗ
ಮಾಡಿದ್ದಾರೆ. ಈ ಸಂಬಂಧ ಎಸಿಬಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ’ ಎಂದು ಬುಧವಾರ
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಂತೋಣಿ ಚರ್ಚ್‍ಗೆ ಸೇರಿದ್ದ ಸಮುದಾಯ ಭವನವನ್ನು ತಮ್ಮ ಕಾರ್ಯ ಸಾಧನೆಗೆ
ಬಳಸಿಕೊಂಡಿದ್ದಾರೆ. ಭವನವನ್ನು ಚರ್ಚ್ ಎಂದು ಉಲ್ಲೇಖಿಸಿ ಕಟ್ಟಡ ದುರಸ್ತಿಯಲ್ಲಿದೆ ಎಂದು ಫೋಟೊ ಸಹಿತ
ದಾಖಲೆ ಸೃಷ್ಟಿಸಿದ್ದಾರೆ. ಸಂತ ಅಂತೋಣಿ ಚರ್ಚ್ ಸುಸ್ಥಿತಿಯಲ್ಲಿದ್ದು, ಅನುದಾನಕ್ಕಾಗಿ
ದುರಸ್ತಿಯಲ್ಲಿದೆ ಎಂದು ಸುಳ್ಳು ದಾಖಲೆ ಸಲ್ಲಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಸಮುದಾಯ ಭವನವನ್ನೇ ಚರ್ಚ್ ಆಗಿ ಮಾರ್ಪಡಿಸಿರುವ ಪರಿಣಾಮ ಯಾವುದೇ ಅಡ್ಡಿಯಿಲ್ಲದೆ ಸರ್ಕಾರ
ಅನುದಾನ ಬಿಡುಗಡೆ ಮಾಡಿದೆ. ಆದರೆ ಒಂದು ರೂಪಾಯಿ ಅಭಿವೃದ್ಧಿ ಕೆಲಸ ಆಗಿಲ್ಲ. ಅಧಿಕಾರಿ ಹಾಗೂ ಚರ್ಚ್
ಫಾದರ್‌ಗಳ ದುರಾಸೆಯಿಂದ ಸಾರ್ವಜನಿಕ ತೆರಿಗೆ ಹಣ ಪೋಲಾಗುತ್ತಿದೆ’ ಎಂದು ದೂರಿದರು.

‘ಹಾಸನ ಸೇರಿದಂತೆ ಜಿಲ್ಲೆಯ ಎಂಟು ಚರ್ಚ್‍ಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಾನೂನು ಹೋರಾಟ
ಮುಂದುವರಿಸಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು
ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಕೇಶ್ ಮೇನೆಜೆಸ್, ಜೆರೋಮ್ ಲೋಬೋ, ಹೆಜಿನ್ ಕ್ವಾಡ್ರೆಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.