ADVERTISEMENT

ಕಾಂಗ್ರೆಸ್ ಅನ್ನು ಮೊದಲು ಜೋಡಿಸಲಿ: ನಳಿನ್ ಕುಮಾರ್ ಕಟೀಲ್

ಪಾಪ ತೊಳೆದುಕೊಳ್ಳಲು ಜೋಡೊ ಯಾತ್ರೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 8:10 IST
Last Updated 21 ಸೆಪ್ಟೆಂಬರ್ 2022, 8:10 IST
 ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್   

ಹಾಸನ: ದೇಶ ವಿಭಜನೆ ಮಾಡಿದ್ದೇ ಕಾಂಗ್ರೆಸ್. ಆ ಪಾಪವನ್ನು ತೊಳೆದುಕೊಳ್ಳಲು ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ. ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ರಂತಹ ಹಿರಿಯ ನಾಯಕರು ಪಕ್ಷ ತ್ಯಜಿಸಿದ್ದಾರೆ. ದೇಶದಲ್ಲಿ ಪ್ರತಿಪಕ್ಷವಾಗಲೂ ನಾಲಾಯಕ್ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಮೊದಲು ಕಾಂಗ್ರೆಸ್ ಅನ್ನು ಜೋಡಿಸುವ ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿಯೂ ಜೋಡೋ ಯಾತ್ರೆಯ ಹೆಸರಿನಲ್ಲಿ ಕಾಂಗ್ರೆಸ್ ಇಬ್ಭಾಗ ಆಗುತ್ತಿದೆ. ಸಿದ್ರಾಮಣ್ಣ ಜೋಡೋ ಕಾರ್ಯಕ್ರಮಕ್ಕೆ ಸಂಬಂಧಿಸಿದ‌ ಸಭೆಗಳಿಗೆ ಹೋಗುತ್ತಿಲ್ಲ. ಡಿ.ಕೆ.‌ಶಿವಕುಮಾರ ಅವರು ಯಾತ್ರೆಯ ಹೆಸರಿನಲ್ಲಿ ಕಾರ್ಯಕರ್ತರನ್ನು ಹೆದರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ADVERTISEMENT

ಮತಾಂಧ ಶಕ್ತಿಗಳು ಉಗ್ರಗಾಮಿ ಸಂಘಟನೆಗಳ ಜೊತೆ ಸೇರಿ ದೇಶ, ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿವೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂತಹ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಸಶಕ್ತವಾಗಿದೆ. ಅದಕ್ಕಾಗಿಯೇ ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎನ್ಐಎ ದಾಳಿ ಮಾಡಿ, ಶಂಕಿತರನ್ನು ಬಂಧಿಸಿದೆ ಎಂದರು.

ನಂತರ ಸಕಲೇಶಪುರ ತಾಲ್ಲೂಕಿನ ಕಂಬ್ರಳ್ಳಿಗೆ ಭೇಟಿ ನೀಡಿದ ಅವರು, ಮಾಜಿ ಶಾಸಕ ದಿ.ಬಿ.ಬಿ. ಶಿವಪ್ಪ ಅವರ ‌ಪತ್ನಿ ಸುಶೀಲಾ ಅವರನ್ನು ಭೇಟಿ‌ಮಾಡಿ, ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.