ADVERTISEMENT

ಹಳೇಬೀಡು| ನೈಸರ್ಗಿಕ ಕೃಷಿ ಕಾರ್ಯಾಗಾರ: ಮಣ್ಣಿನ ಆರೋಗ್ಯ ಕಾಪಾಡಲು ರೈತರ ಪಣ

ಎಚ್.ಎಸ್.ಅನಿಲ್ ಕುಮಾರ್
Published 7 ಜನವರಿ 2026, 6:55 IST
Last Updated 7 ಜನವರಿ 2026, 6:55 IST
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ನಡೆಯುತ್ತಿರುವ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ನೇಪಾಳದ ರೈತರು ನೈಸರ್ಗಿಕ ಕೃಷಿ ಪಾಠ ಆಲಿಸಿದರು. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಚುಕ್ಕಿ ನಂಜುಂಡಸ್ವಾಮಿ ಪಾಳ್ಗೊಂಡಿದ್ದರು 
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ನಡೆಯುತ್ತಿರುವ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ನೇಪಾಳದ ರೈತರು ನೈಸರ್ಗಿಕ ಕೃಷಿ ಪಾಠ ಆಲಿಸಿದರು. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಚುಕ್ಕಿ ನಂಜುಂಡಸ್ವಾಮಿ ಪಾಳ್ಗೊಂಡಿದ್ದರು    

ಹಳೇಬೀಡು: ನೈಸರ್ಗಿಕ ಕೃಷಿ ಕಾರ್ಯಾಗಾರದ 4ನೇ ದಿನವಾದ ಮಂಗಳವಾರ, ದೂರದಿಂದ ಬಂದಿದ್ದ ರೈತರು ವಿಷ ಮುಕ್ತ ಆಹಾರ ಉತ್ಪಾದಿಸುವ ಆಸಕ್ತಿ ತೋರಿಸಿದರು. ಭಾಗವಹಿಸಿದ್ದ ರೈತರು ಜೀವಾಮೃತ ಕೊಟ್ಟು ಮಣ್ಣಿನ ಆರೋಗ್ಯ ಹಾಗೂ ಜನರ ಆರೋಗ್ಯ ಕಾಪಾಡುವ ಪಣತೊಟ್ಟರು. 

ಸುಭಾಷ್ ಪಾಳೇಕರ್ ಇಂಗ್ಲಿಷ್‌ನಲ್ಲಿ ಹೇಳಿದ ಪಾಠಗಳನ್ನು ಕನ್ನಡ ಭಾಷೆಗೆ ಭಾಷಾಂತರ ಮಾಡಿದ ಪರಿಣಿತರು, ತಮಿಳು, ತೆಲುಗು ಮೊದಲಾದ ಭಾಷೆಯಲ್ಲಿಯೂ ಪಾಠವನ್ನು ಅರ್ಥೈಸಿದರು. 

ರಾಜ್ಯ, ದೇಶ, ಭಾಷೆ  ಬೇರೆಯಾದರೂ ಭಾಗವಹಿಸಿದ ರೈತರೆಲ್ಲರೂ, ನೀವು ಬದುಕಿ ಇತರರನ್ನು  ಬದುಕಿಸಿ ಎಂಬ ತತ್ವ ಅನುಸರಿಸುವ ತವಕದಲ್ಲಿದ್ದರು. ನಾಲ್ಕು ದಿನದಿಂದ ಬಿಡುವಿಲ್ಲದಂತೆ ಪಾಠ ಕೇಳಿದ್ದರು. ತಿಳಿದುಕೊಳ್ಳುವ ಆಸಕ್ತಿ ಮಾತ್ರ ಕುಂದಿರಲಿಲ್ಲ.

ADVERTISEMENT

ಎತ್ತರ ಪ್ರದೇಶದ ಜಮೀನು, ನೈಸರ್ಗಿಕ ಕೃಷಿಗೆ ಅನುಕೂಲ. ನೀರು ನಿಲ್ಲುವ ಜೌಗು ಪ್ರದೇಶದ ಜಮೀನು ಆಯ್ಕೆ ಮಾಡಿಕೊಳ್ಳಬಾರದು. ಮೃದು, ಗಟ್ಟಿ ಇಲ್ಲದ ಮಧ್ಯಮ ಗುಣದ ಮಣ್ಣು ಅತ್ಯುಪಯುಕ್ತ. ಬೆಳೆಯ ತ್ಯಾಜ್ಯವನ್ನು ಜಮೀನಿನಲ್ಲಿ ಸುಡಬಾರಾದು. ತ್ಯಾಜ್ಯವನ್ನು ಬದುವಿನ ಮೇಲೆ ಸಂಗ್ರಹಿಸಿಟ್ಟು ಮುಂದಿನ ಬೆಳೆಗೆ ಬಳಕೆ ಮಾಡಬೇಕು. ಉಳಿಮೆ ಮಾಡಿದ ಮಣ್ಣಿಗೆ ಸೂರ್ಯನ ಕಿರಣ ಬೀಳುವಂತೆ ನೋಡಿಕೊಳ್ಳಬೇಕು. ಸೂಕ್ತ ಸಂದರ್ಭದಲ್ಲಿ ಮಾತ್ರ ಉಳುಮೆ ಮಾಡಬೇಕು   ಎಂಬುದನ್ನು ಸುಭಾಷ್ ಪಾಳೇಕರ್ ಅವರಿಂದ ತಿಳಿದು ಕೊಂಡೆವು ಎಂದು  ರೈತ ಮಲ್ಲಾಪುರ ರವಿ ಹೇಳಿದರು. 

200 ರಿಂದ 400 ಕೆ.ಜಿ ಘನತ್ಯಾಜ್ಯ ಜೀವಾಮೃತವನ್ನು ಬಿತ್ತನೆಗೆ ಮೊದಲು ಜಮೀನಿಗೆ ಚೆಲ್ಲಬೇಕು. ಮುಂಗಾರು ಮಳೆಗಿಂತ ಮೊದಲು ಮೊಳಕೆಯೊಡೆದ ಕಳೆ ಬೀಜ, ಮಳೆ ಬಂದ ನಂತರ ಹಸಿರಾಗಿರುತ್ತದೆ. ಈ ಸಂದರ್ಭದಲ್ಲಿ ಉಳುಮೆ ಮಾಡಿದರೆ ಕಳೆ ಕ್ಷೀಣಿಸುತ್ತದೆ ಎಂದು ಪಾಳೇಕರ್ ಹೇಳಿದ್ದು, ಕಳೆನಾಶಕ ಸಿಂಪಡಿಸಿ, ಜೀವಾಣು ಕೊಲ್ಲುವ ಅಗತ್ಯವಿಲ್ಲ ಎಂಬುದು ರೈತರಿಗೆ ಮನವರಿಕೆ ಆಯಿತು ಎಂದು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ರಾಜ್ಯ ರೈತಸಂಘ ಸಾಮೂಹಿಕ ಅಧ್ಯಕ್ಷೀಯ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ, ಸ್ಥಳೀಯ ಮುಖಂಡರಾದ ತಟ್ಟೆಹಳ್ಳಿ ಹಾಲಪ್ಪ, ಎಲ್.ಈ.ಶಿವಪ್ಪ, ಪುಟ್ಟರಾಜು, ಗಂಗಾಧರಪ್ಪ, ಅಡುಗೆ ರಾಜು, ಮುನ್ನಾಭಾಯಿ, ಮಹೇಶ್, ಶಿವಕುಮಾರ್ ಅತಿಥಿ ಸತ್ಕಾರ ನಡೆಸಿದರು.

ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿ ತಜ್ಞ ಡಾ.ಸುಭಾಷ್ ಪಾಳೇಕರ್ ರೈತರಿಗೆ ತೋಟಗಾರಿಕೆಯಲ್ಲಿ ನೈಸರ್ಗಿಕ ಮಿಶ್ರ ಬೇಸಾಯ ಪದ್ಧತಿ ವಿವರಿಸಿದರು
ಊಟ ಉಪಚಾರ ಯಾವುದರಲ್ಲಿಯೂ ವ್ಯತ್ಯಾಸ ಆಗದಂತೆ ಕಾರ್ಯಾಗಾರ ಪೂರೈಸಿದೆವು. ಹೊರ ರಾಜ್ಯ ಹೊರ ದೇಶದವರು ಸಂಭ್ರಮ ವ್ಯಕ್ತಪಡಿಸಿದರು
ಟಿ.ಬಿ.ಹಾಲಪ್ಪ ರೈತಸಂಘ ಹಳೇಬೀಡು ಹೋಬಳಿ ಸಾಮೂಹಿಕ ನಾಯಕ
ಸುಭಾಷ್ ಪಾಳೇಕರ್ ಕಾರ್ಯಾಗಾರದಲ್ಲಿ ಐಟಿ ಬಿಟಿ ಉದ್ಯೋಗಿಗಳು ಹೆಚ್ಚು ಭಾಗವಹಿಸುತ್ತಿದ್ದರು. ಪುಷ್ಪಗಿರಿ ಕಾರ್ಯಾಗಾರದಲ್ಲಿ ರೈತರೇ ಹೆಚ್ಚಾಗಿದ್ದು ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ತವಕದಲ್ಲಿದ್ದಾರೆ
ಹೊನ್ನೂರು ಪ್ರಕಾಶ್ ರಾಜ್ಯ ರೈತಸಂಘ ಸಾಮೂಹಿಕ ಅಧ್ಯಕ್ಷೀಯ ಮಂಡಳಿ ಸದಸ್ಯ

ವಿಷಮುಕ್ತ ಆಹಾರ ಪೂರೈಸುವ ‘ನಮ್ದು’ ಸಂತೆ

ರೈತರಿಂದ ನೇರವಾಗಿ ಬಳಕೆದಾರರಿಗೆ ವಿಷಮುಕ್ತ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ ‘ನಮ್ದು’ ಸಂತೆ ಎಂಬ ರೈತ ಉತ್ಪಾದಕ ಸಂಸ್ಥೆಯನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆಸಲಾಗುತ್ತಿದೆ ಎಂದು ರೈತ ಸಂಘ ಕಾರ್ಯಕರ್ತ ತಿಪಟೂರಿನ ಜಯಚಂದ್ರ ಶರ್ಮ ವಿವರಿಸಿದರು. ಪ್ರತಿ ಶನಿವಾರ ನಡೆಯುವ 'ನಮ್ದು' ಸಂತೆಗೆ 35 ರೈತರು ನೈಸರ್ಗಿಕ ಕೃಷಿ ಉತ್ಪನ್ನವನ್ನು ಬಳಕೆದಾರರಿಗೆ ಮಾರಾಟ ಮಾಡುತ್ತಾರೆ. ಹಣ್ಣು ತರಕಾರಿ ಕಾಳು ಕಡಿ ಮಾರಾಟ ನಡೆಯುತ್ತದೆ. ಮಧ್ಯವರ್ತಿಗಳ ಪ್ರವೇಶವಿಲ್ಲದೇ ದುಬಾರಿ ಇಲ್ಲದ ಬೆಲೆಗೆ ಬಳಕೆದಾರರು ರೈತರಿಂದ ನೇರವಾಗಿ ಖರೀದಿಸುತ್ತಾರೆ‌. ರೈತರು ₹15ಸಾವಿರದಿಂದ ₹75ಸಾವಿದವರೆಗೆ ವಹಿವಾಟು ನಡೆಸುತ್ತಾರೆ. 'ನಮ್ದು' ಸಂತೆಯಲ್ಲಿ ಪ್ರತಿವಾರ ₹7 ಲಕ್ಷದಿಂದ ₹ 8 ಲಕ್ಷ ವಹಿವಾಟು ನಡೆಯುತ್ತದೆ. ನೈಸರ್ಗಿಕ ಕೃಷಿಕರು  ರೈತ ಉತ್ಪಾದಕ ಸಂಸ್ಥೆ ಆರಂಭಿಸುವುದರಿಂದ ಸ್ವಾವಲಂಬಿಗಳಾಗಬಹುದು ಎಂದು ರೈತರಿಗೆ ಮನವರಿಕೆ ಮಾಡಿದರು.

ಅಡಿಕೆ ಬೆಳೆ ಅಪಾಯಕಾರಿ

ಅಡಿಕೆಯಿಂದ ಗುಟ್ಕಾ ತಯಾರಿಸುವುದರಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಡಿಕೆ ಅಪಾಯಕಾರಿ ಬೆಳೆಯಾಗಿದೆ. ಗುಟುಕು ಸೇವನೆಯಿಂದ ಲೆಕ್ಕವಿಲ್ಲದಷ್ಟು ಮಂದಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ.  ಅಡಿಕೆಗೆ ಪರ್ಯಾಯವಾಗಿ ಏಲಕ್ಕಿ ಬಾಳೆ ಬೆಳೆಯಬಹುದು. ಮಿಶ್ರ ಬೆಳೆಯಲ್ಲಿ ವಿಳ್ಯದೆಲೆ ಬಳ್ಳಿ ಬೆಳೆಯಬಹುದು. ವಿಳ್ಯದೆಲೆಯ ಜೊತೆಗೆ ಅಡಿಕೆ ಬಳಸದೇ ಸೋಂಪು ಹಾಗೂ ಹಾಜ್ಮೋಲ ಸೇರಿಸಿಕೊಂಡು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸುಭಾಷ್ ಪಾಳೇಕರ್ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.