ADVERTISEMENT

ಹಾಸನ: ಹೋಟೆಲ್‌ಗಳಲ್ಲಿ ವ್ಯಾಪಾರವಿಲ್ಲ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 15:48 IST
Last Updated 19 ಆಗಸ್ಟ್ 2020, 15:48 IST

ಹಾಸನ: ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಬಳಿಕವೂ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬಹುತೇಕ ಹೋಟೆಲ್, ರೆಸ್ಟೋರೆಂಟ್‌ ಗಳಲ್ಲಿ ವ್ಯಾಪಾರವಿಲ್ಲ.

ಲಾಕ್ ಡೌನ್ ಸಡಿಲಿಕೆ ನಂತರ ಆರಂಭದಲ್ಲಿ ಗ್ರಾಹಕರು ಭೇಟಿ ನೀಡಲು ಆರಂಭಿಸಿದರು. ಆದರೆ ಸೋಂಕು ಗ್ರಾಮೀಣ ಪ್ರದೇಶಗಳಲ್ಲೂ ಪಸರಿಸುತ್ತಿದ್ದಂತೆ ಭಯಭೀತಗೊಂಡ ಜನತೆ, ಹೋಟೆಲ್‌, ರೆಸ್ಟೋರೆಂಟ್‌ಗಳತ್ತ ಸುಳಿಯುತ್ತಿಲ್ಲ.

ಕುಳಿತು ಆಹಾರ ಸೇವಿಸಲು ಅವಕಾಶ ಇದ್ದರೂ ಗ್ರಾಹಕರ ಸಂಖ್ಯೆ ಶೇಕಡಾ 10 ದಾಟಿಲ್ಲ. ಚೇತರಿಕೆ ನಿರೀಕ್ಷೆ ಯಲ್ಲಿದ್ದ ಹೋಟೆಲ್ ಉದ್ಯಮಕ್ಕೆ ಮತ್ತೆ ಹೊಡೆತ ಬಿದ್ದಿದ್ದೆ. ಹಾಗಾಗಿ ಹೋಟೆಲ್ ಗಳಲ್ಲಿ ತಿಂಡಿ, ತಿನಿಸು ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ದೊಡ್ಡ ಹೋಟೆಲ್‌ಗಳು ಸಹ ಬಗೆ ಬಗೆಯ ತಿನಿಸು ತಯಾರಿಸುತ್ತಿಲ್ಲ. ಬೆಳಿಗ್ಗೆ ಇಡ್ಲಿ, ದೋಸೆ, ಚಪಾತಿ ಗೆ ಸೀಮಿತಗೊಳಿಸಿವೆ.

ADVERTISEMENT

ದಿನಕ್ಕೆ ₹ 50 ಸಾವಿರ ‌ವ್ಯಾಪಾರ ಆಗುತ್ತಿದ್ದ ಹೋಟೆಲ್ ಗಳಲ್ಲಿ ₹ 7 ಸಾವಿರ ರೂಪಾಯಿ ವ್ಯಾಪಾರ ವಾದರೆ ಹೆಚ್ಚು. ಕೆಲಸಗಾರರಿಗೆ ಸಂಬಳ‌ ಕೊಡಲು ಆಗದ ಪರಿಸ್ಥಿತಿ ಇದೆ. ಇನ್ನು ಸಣ್ಣ ಹೋಟೆಲ್ ಮಾಲೀಕರ ಪಾಡು ಹೇಳತೀರದು.

' ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಜನರು ಭಯಗೊಂಡು ಹೋಟೆಲ್ ‌ಕಡೆ ಬರುತ್ತಿಲ್ಲ . ಲಾಕ್‌ಡೌನ್ ಗೂ ಮೊದಲು ದಿನಕ್ಕೆ ₹ 50 ಸಾವಿರಕ್ಕೂ ಹೆಚ್ಚು ವ್ಯಾಪಾರವಾಗುತ್ತಿತ್ತು. ಈಗ ವ್ಯಾಪಾರವೇ ಇಲ್ಲ. ಒಂದೊಂದು ದಿನ ಸಂಜೆಯಾದರೂ ಗ್ರಾಹಕರು ಬರುವುದಿಲ್ಲ. ಮುಂದೆ ಸರಿ ಹೋಗಬಹುದು ಅಂದುಕೊಂಡು ನಷ್ಟದಲ್ಲಿಯೇ ನಡೆಸುತ್ತಿದ್ದೇನೆ' ಎಂದು ಕೃಷ್ಣ ಭವನ ಮಾಲೀಕ ಸುರೇಶ್ ತಿಳಿಸಿದರು.

' ಶಾಲಾ, ಕಾಲೇಜು ಆರಂಭಗೊಂಡರೆ ಗ್ರಾಹಕರು ಹೋಟೆಲ್ ಗಳತ್ತ ಬರುತ್ತಾರೆ. ಸದ್ಯದ ವ್ಯಾಪಾರ ತೀರಾ ಕಡಿಮೆ. ಹಾಗಾಗಿ ಹೆಚ್ಚಿನ ತಿನಿಸು ಮಾಡುವುದಿಲ್ಲ. ಕಡಿಮೆ ಕೆಲಸಗಾರರನ್ನು ಇಟ್ಟುಕೊಂಡು ನಷ್ಟದಲ್ಲಿಯೇ ನಡೆಸುತ್ತಿದ್ದೇವೆ' ಎಂದು ಪಲ್ಗುಣಿ ಹೋಟೆಲ್ ಮಾಲೀಕ ರತ್ನಾಕರ ತಿಳಿಸಿದರು.‌

'ಮಧ್ಯಾಹ್ನದ ಊಟಕ್ಕೆ ಗ್ರಾಹಕರು ಬರಲು ಆರಂಭಿಸಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇವೆ ' ಎಂದು ಪಾರಿಜಾತ ಹೋಟೆಲ್ ಮಾಲೀಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.