ADVERTISEMENT

ಹೆತ್ತೂರು | ಶಿಥಿಲಗೊಂಡ ಸೇತುವೆ: ಹೆಚ್ಚಿದ ಆತಂಕ

ಹೊರ ಜಿಲ್ಲೆ, ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ: ಹೆಚ್ಚಿದ ವಾಹನ ಸಂಚಾರ

ಪ್ರಜಾವಾಣಿ ವಿಶೇಷ
Published 2 ಆಗಸ್ಟ್ 2025, 5:52 IST
Last Updated 2 ಆಗಸ್ಟ್ 2025, 5:52 IST
ಹೆತ್ತೂರು ಸಮೀಪದ ಐಗೂರು ಗ್ರಾಮದಲ್ಲಿ ನಿರ್ಮಿಸಿರುವ ಸೇತುವೆ ಶಿಥಿಲವಾಗಿದೆ.
ಹೆತ್ತೂರು ಸಮೀಪದ ಐಗೂರು ಗ್ರಾಮದಲ್ಲಿ ನಿರ್ಮಿಸಿರುವ ಸೇತುವೆ ಶಿಥಿಲವಾಗಿದೆ.   

ಹೆತ್ತೂರು: ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಸೇತುವೆ ನಿರ್ವಹಣೆ ಕೊರತೆಯಿಂದ ಹೊಂಡ ಬಿದ್ದಿದ್ದು, ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಆದರೂ ಸಂಬಂಧಿಸಿದ ಇಲಾಖೆ, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಸೇತುವೆ ಕೈಪಿಡಿಗಳಿಗೆ ಬಳ್ಳಿ, ಗಿಡಗಳು ಹಬ್ಬಿದ್ದು, ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆಗೆ ತಲುಪಿದೆ. ಕೆಲವು ಕೈಪಿಡಿಗಳು ಮುರಿದು, ಹೇಮಾವತಿ ಉಪ ನದಿ ಐಗೂರು ಹೊಳೆಗೆ ಬೀಳುತ್ತಿವೆ.

ಸೇತುವೆ ನಿರ್ಮಾಣವಾಗಿ ದಶಕಗಳು ಕಳೆದರೂ, ಈ ಸೇತುವೆಯ ದುರಸ್ತಿ ಕೈಗೊಂಡಿಲ್ಲ. ಶನಿವಾರಸಂತೆ, ಯಸಳೂರು, ಕೊಡ್ಲಿಪೇಟೆ, ಸಕಲೇಶಪುರ, ಅರಕಲಗೂಡು, ಮೈಸೂರು, ಹಾಸನ, ಬೆಂಗಳೂರು, ಸೇರಿದಂತೆ ನಗರ, ಮಹಾನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ ಈ ಸೇತುವೆ.

ADVERTISEMENT

ನಿತ್ಯ ಸಾವಿರಾರು ವಾಹನಗಳು ಈ ಸೇತುವೆಯ ಮೇಲೆ ಓಡಾಡುತ್ತವೆ. ಈ ಸೇತುವೆ ಮೇಲೆ ಇತ್ತೀಚಿನ ದಿನಗಳಲ್ಲಿ ಭಾರದ ಮರಳು, ಮರದ ದಿಮ್ಮಿ, ಟಿಂಬರ್‌ ಸಾಗಿಸುವ ವಾಹನಗಳು ಸಂಚರಿಸುತ್ತಿದ್ದು, ಒತ್ತಡದಿಂದಾಗಿ ಶಿಥಿಲಗೊಳ್ಳುತ್ತಿದೆ. ಪಿಲ್ಲರ್‌ಗಳು ದುರ್ಬಲಗೊಂಡಿವೆ. ಮರದ ಬೇರುಗಳು ಹರಡಿ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ.

1950ರಲ್ಲಿ ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಯಸಳೂರು ಗ್ರಾಮದ ವೈ.ಡಿ. ಧರ್ಮಪ್ಪ ಈ ಸೇತುವೆ ಮಂಜೂರು ಮಾಡಿಸಿದ್ದರು. ಮೇಗಲಮನೆ ಪುಟ್ಟಸ್ವಾಮಿಗೌಡ ಗುತ್ತಿಗೆ ಮಾಡಿ, 1957 ರಲ್ಲಿ ಅಂದಿನ ಲೋಕೋಪಯೋಗಿ ಸಚಿವ ಚನ್ನಿಗರಾಮಯ್ಯ, ಸಚಿವ ಸಿದ್ದಯ್ಯ ಉದ್ಘಾಟಿಸಿದ್ದರು.

ಸೇತುವೆ ಬಳಿ ಬೀದಿ ದೀಪದ ವ್ಯವಸ್ಥೆಯೂ ಇಲ್ಲ. ನಾಮ ಫಲಕ ಇಲ್ಲ. ಶಿಥಿಲಗೊಂಡು ಕುಸಿಯುವ ಹಂತ ತಲುಪುತ್ತಿರುವ ಸೇತುವೆ ದುರಸ್ತಿಗೆ ರಾಜ್ಯ ಲೋಕೋಪಯೋಗಿ ಇಲಾಖೆ ಮತ್ತು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಪಾಯ ಸಂಭವಿಸುವ ಮೊದಲು ದುರಸ್ತಿ ಮಾಡಬೇಕು ಎಂದು ನಿವಾಸಿಗಳಾದ ಶಂಕರೇಗೌಡ, ಅರ್ಜುನ್, ಗಂಗಾಧರ, ಮಲ್ಲಿಕಾರ್ಜುನ, ವಿಘ್ನೇಶ್ ಆಗ್ರಹಿಸಿದರು.

ಈ ಸೇತುವೆ ಹಳೆಯದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಈ ಸೇತುವೆ ಮೇಲೆ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೇತುವೆ ಮೇಲೆ ಒತ್ತಡವೂ ಜಾಸ್ತಿಯಾಗುತ್ತಿದೆ. ಹೊಸ ಸೇತುವೆ ನಿರ್ಮಾಣ ಅಗತ್ಯವಾಗಿದೆ. ಸರ್ಕಾರ ಕೂಡಲೇ ಹೂಸ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಹಾಡ್ಲಹಳ್ಳಿ ಗಗನ್ ಒತ್ತಾಯಿಸಿದರು.

ಹೆದ್ದಾರಿಯಲ್ಲಿ ಈ ಸೇತುವೆ ಇರುವುದರಿಂದ ರಾಜ್ಯ ಮತ್ತು ಹೊರರಾಜ್ಯಗಳ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಸಂಪರ್ಕ ಕಡಿತಗೊಳ್ಳುವ ಮೊದಲು ಅಗತ್ಯ ಕ್ರಮ ಕೈಗೊಳ್ಳಬೇಕು
–ಐ.ವಿ. ಶಂಕರೇಗೌಡ, ಐಗೂರು ಗ್ರಾಮಸ್ಥ
ಈ ಸೇತುವೆ ಬಹಳ ಹಳೆಯದಾಗಿದ್ದು ಮರು ನಿರ್ಮಾಣ ಮಾಡುವ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಗಮನಕ್ಕೆ ತರಲಾಗಿದೆ
–ಸಿಮೆಂಟ್ ಮಂಜು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.