ಹಾಸನ: ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ
ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಜಿಲ್ಲಾ ಕಾಂಗ್ರೆಸ್ ಭವನದ ಎದುರು ಶನಿವಾರ ಪ್ರತಿಭಟನೆ
ನಡೆಸಲಾಯಿತು.
ಬಿಜೆಪಿ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ
ವಿಫಲವಾಗಿದೆ. ಅಧಿಕವಾಗಿ ತೆರಿಗೆ ವಿಧಿಸಿ ಲೂಟಿ ಮಾಡುತ್ತಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ
ಏರಿಕೆ ಆಗುತ್ತಲೇ ಇದೆ. ದೇಶದಲ್ಲಿ ಆಡಳಿತ ನಡೆಸಲು ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಉತ್ತಮ ಆರೋಗ್ಯ, ಕುಡಿಯುವ ನೀರು, ಮನೆ, ಪರಿಸರ, ಶಿಕ್ಷಣ ಹಾಗೂ ಉದ್ಯೋಗ
ಕಲ್ಪಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ, ಇಂದು ಸರ್ಕಾರಿ ವಲಯದ ಅನೇಕ ಸಂಸ್ಥೆಗಳನ್ನು
ಖಾಸಗೀಕರಣ ಮಾಡಲಾಗುತ್ತಿದೆ. ಶ್ರೀಮಂತರು ಶ್ರೀಮಂತರಾಗಿಯೇ ಬಡವರು ಬಡವರಾಗಿಯೇ
ಇರುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಳೆದ 70 ವರ್ಷಗಳಿಂದ ದೇಶದಲ್ಲಿ ಕೂಡಿಟ್ಟಿದ್ದ ಸಂಪತ್ತನ್ನು ಬಿಜೆಪಿ ಸರ್ಕಾರ 7 ವರ್ಷದಲ್ಲಿ ಸರ್ವನಾಶ
ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಸ್ವಚ್ಛ ಭಾರತ್ ಅಭಿಯಾನ, ಸಬ್ ಕಾ
ಸಾತ್ ಸಬ್ ಕಾ ವಿಕಾಸ್ ಘೋಷಣೆಗಳು ಅವರಿಗೆ ವಿರುದ್ಧವಾಗಿವೆ. ಜನವಿರೋಧಿ ನೀತಿಗಳನ್ನು ಜಾರಿ
ಮಾಡುತ್ತಿರುವ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನರು ರೋಸಿ ಹೋಗಿದ್ದಾರೆ. ಜನ ಸಾಮಾನ್ಯರ ಕಷ್ಟ,
ಸಮಸ್ಯೆ ಅರ್ಥ ಮಾಡಿಕೊಂಡು ಆಡಳಿತ ನಡೆಸುತ್ತಿಲ್ಲ. ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ
ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಸ್ತ್ರೀ ಶಕ್ತಿ ಸಂಘಟನಾ ಸಂಯೋಜಕಿ ಅಕ್ಕಯ್ ಪದ್ಮಶಾಲಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ತಾರ ಚಂದನ್, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ರಂಗೇಗೌಡ, ಮರ್ಕುಲಿ ಗೋಪಾಲೇಗೌಡ, ವಿನೋದ್, ಪಿ.ಎಸ್. ಜಮೀಲಾ, ಶಿವಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.