ಹಾಸನ: ಜೆಡಿಎಸ್ ನಾಯಕರ ವಿರೋಧದ ನಡುವೆಯೂ ನಗರದ ತಾಲ್ಲೂಕುಕಚೇರಿ ಕಟ್ಟಡವನ್ನು ಶನಿವಾರ ರಾತ್ರಿ ನೆಲಸಮ ಮಾಡಲಾಗಿದೆ.
ನಗರದ ಬಿ.ಎಂ. ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ಮತ್ತು ಪಕ್ಕದ ಹೆದ್ದಾರಿ ವಿಶೇಷ ಭೂಸ್ವಾಧೀನ ಕಚೇರಿ ಕಟ್ಟಡವನ್ನು ಜೆಸಿಬಿ ಬಳಸಿಧ್ವಂಸಗೊಳಿಸಲಾಗಿದೆ. ಈ ಜಾಗದಲ್ಲಿ ₹ 10 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಶಾಸಕ ಪ್ರೀತಂ ಗೌಡ ಯೋಜನೆ ರೂಪಿಸಿದ್ದಾರೆ.
ಈಗಾಗಲೇ ತಾಲ್ಲೂಕು ಕಚೇರಿ ಆಡಳಿತವನ್ನು ವಿದ್ಯಾನಗರದ ಜಿಲ್ಲಾ ತರಬೇತಿಕೇಂದ್ರದ ಎದುರು ಹಾಸ್ಟೆಲ್ಗೆ ಸ್ಥಳಾಂತರಿಸಲಾಗಿದೆ.
ಹಾಸನದಲ್ಲಿ ಹಳೆ ತಾಲ್ಲೂಕು ಕಚೇರಿ ಕೆಡವಿ ನೂತನವಾಗಿ ನಿರ್ಮಿಸುವುದುಮತ್ತು ಟ್ರಕ್ ಟರ್ಮಿನಲ್ ಕಾಮಗಾರಿಯನ್ನು ಶಾಸಕ ಎಚ್.ಡಿ. ರೇವಣ್ಣವಿರೋಧಿಸುತ್ತಲೇ ಬಂದಿದ್ದರು. ಒಂದು ಹಂತದಲ್ಲಿ ಟ್ರಕ್ ಟರ್ಮಿನಲ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲೂ ರೇವಣ್ಣ ಯಶಸ್ವಿಯಾಗಿದ್ದರು.
ಟ್ರಕ್ ಟರ್ಮಿನಲ್ ಪ್ರಹಸನ ಬಳಿಕ ಕೆಲವೇ ತಾಸುಗಳಲ್ಲಿತಾಲ್ಲೂಕು ಕಚೇರಿಕಟ್ಟಡವನ್ನು ಕೆಡವಲಾಗಿದೆ. ಇದು ಬಿಜೆಪಿ–ಜೆಡಿಎಸ್ ಜಟಾಪಟಿಗೆ ನಾಂದಿ ಹಾಡಿದೆ.
ನಗರದ ಹೊರವಲಯದ ಕೆಂಚಟ್ಟಹಳ್ಳಿಯಲ್ಲಿ ಆರಂಭವಾಗಿರುವ ಟ್ರಕ್ಟರ್ಮಿನಲ್ ನಿರ್ಮಾಣ ಕಾಮಗಾರಿ ಜೆಡಿಎಸ್–ಬಿಜೆಪಿ ರಾಜಕೀಯಮೇಲಾಟಕ್ಕೆ ವೇದಿಕೆಯಾಗಿದ್ದು, ಶನಿವಾರ ಶಾಸಕ ಎಚ್.ಡಿ.ರೇವಣ್ಣ ಅವರು ಹೇಮಗಂಗೋತ್ರಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಜತೆ ಧರಣಿ ನಡೆಸಿಕೆಲಸಕ್ಕೆ ತಡೆಯೊಡ್ಡಿದ್ದರು.
ಈ ವೇಳೆ ಜೆಡಿಎಸ್– ಬಿಜೆಪಿ ಕಾರ್ಯಕರ್ತರು ಪರಸ್ಪರ ವಾಗ್ವಾದಕ್ಕಿಳಿದಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಟ್ರಕ್ ಟರ್ಮಿನಲ್ ವಿಚಾರವಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಪ್ರತಿಭಟನೆ, ಕಾಮಗಾರಿಗೆ ತಡೆ, ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ನಡುವಿನಜಟಾಪಟಿ ನಿಯಂತ್ರಿಸಲು ಜಿಲ್ಲಾಧಿಕಾರಿ ಆರ್.ಗಿರೀಶ್ ನಿಷೇಧಾಜ್ಞೆ ಅಸ್ತ್ರಪ್ರಯೋಗಿಸುವ ಮೂಲಕ ಸಂಘರ್ಷಕ್ಕೆ ತಾತ್ಕಾಲಿಕ ಅಂತ್ಯ ಹಾಡಿದರು. ಇದುಮೇಲ್ನೋಟಕ್ಕೆ ರೇವಣ್ಣ ಅವರ ಪ್ರತಿರೋಧಕ್ಕೆ ಜಯ ದೊರೆಂತಂತಾಯಿತು.
ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಘರ್ಷಣೆ, ರೇವಣ್ಣ ಧರಣಿ ನಡೆಸಿರುವ ಬಗ್ಗೆ ಮುಖ್ಯಮಂತ್ರಿ ಕಚೇರಿ ಜಿಲ್ಲಾಡಳಿತದಿಂದ ಶನಿವಾರ ಸಂಜೆ ಮಾಹಿತಿ ಪಡೆದಿತ್ತು. ಹಿರಿಯ ಅಧಿಕಾರಿಗಳು ಟ್ರಕ್ ಟರ್ಮಿನಲ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ ಬಳಿಕ ತಾತ್ಕಾಲಿಕ ಪರಿಹಾರವಾಗಿ ಕಾಮಗಾರಿ ನಿಲ್ಲಿಸಲು ಸೂಚನೆ ನೀಡಿದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.