ಹೆತ್ತೂರು: ಮಲೆನಾಡು ಭಾಗದಲ್ಲಿ ವಾರದಿಂದ ಮೋಡ ಹಾಗೂ ಆಗಾಗ ಮಳೆ ಇರುವುದರಿಂದ ಕಾಫಿ ಮತ್ತು ಭತ್ತದ ಕೃಷಿಕರು ಕಂಗಾಲಾಗಿದ್ದಾರೆ.
ಯಸಳೂರು, ಹೆತ್ತೂರು ಹೋಬಳಿಯಲ್ಲಿ ಮುಂಗಾರು ವಿಳಂಬ, ಉತ್ಪಾದನಾ ವೆಚ್ಚ ಹೆಚ್ಚಳ, ಕಾರ್ಮಿಕರ ಕೊರತೆ, ರೋಗಬಾಧೆ ಮತ್ತು ಫಸಲು ನಷ್ಟದ ಭೀತಿಯಲ್ಲಿದ್ದ ಭತ್ತ ಮತ್ತು ತೋಟಗಾರಿಕಾ ಬೆಳೆಗಾರರು ಈಗ ಅಕಾಲಿಕ ಮಳೆ ಬೀಳುತ್ತಿರುವುದರಿಂದ ಬಂದ ಫಸಲನ್ನು ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ
ಹೋಬಳಿಯಲ್ಲಿ ಕೆಲವು ರೈತರು ಸೋನೆ ಮಳೆಯಲ್ಲಿಯೇ ಕಾಫಿ ಹಣ್ಣನ್ನು ಬಿಡಿಸಿದ್ದು ಅವುಗಳನ್ನು ಒಣಗಿಸುವುದು ಸವಾಲಾಗಿದೆ.
‘ಕಾಫಿ ಮತ್ತು ಭತ್ತದ ಫಸಲು ಒಟ್ಟಿಗೆ ಬರುತ್ತಿದ್ದು, ಕಾರ್ಮಿಕರ ಕೊರತೆ ಇದೆ. ಈಗ ಮಳೆ ಬರುತ್ತಿದ್ದು ಭತ್ತದ ಫಸಲು ಮನೆ ಸೇರುವುದು ಕಷ್ಟ’ ಎಂದು ಚಿಕ್ಕಂದೂರು ಗ್ರಾಮದ ಕೃಷಿಕ ಗೋಪಾಲ್ ಆತಂಕ ವ್ಯಕ್ತಪಡಿಸಿದರು.
‘ಈಗ ಅಲ್ಲಲ್ಲಿ ಮಳೆ ಬೀಳುತ್ತಿದೆ. ಜೋರು ಮಳೆಯಾದಲ್ಲಿ ಕಾಫಿ ಹಣ್ಣುಗಳು ಒಡೆದು ಕೆಳಗೆ ಬಿದ್ದು ಮಣ್ಣು ಸೇರುತ್ತವೆ. ಕಳೆ ತೆಗೆದು ಗಿಡದ ಸುತ್ತ ಸ್ವಚ್ಛ ಕೂಡಾ ಈ ಬಾರಿ ಮಾಡಿಲ್ಲ. ಇದರಿಂದಾಗಿ ಬಿದ್ದ ಹಣ್ಣು ಕಾಫಿಯನ್ನು ಆಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಯಡಕೇರಿ ಗ್ರಾಮದ ಕೆ.ಬಿ ಗಂಗಾಧರ್ ಹೇಳಿದರು.
‘ಪ್ರಸಕ್ತ ವರ್ಷ ಮುಂಗಾರು ವಿಳಂಬವಾಗಿ, ನಂತರ ಎರಡು ವಾರ ಧಾರಾಕಾರ ಸುರಿಯಿತು. ಬಿಸಿಲಿನಿಂದಾಗಿ ಆಗಸ್ಟ್ ತಿಂಗಳಲ್ಲೇ ಕೆಲ ಗಿಡಗಳಲ್ಲಿ ಕಾಫಿ ಕಾಯಿಗಳು ಹಣ್ಣಾಗಿದ್ದವು. ಬಹುತೇಕ ಕಡೆ ಹೂ ಮಳೆ ಸರಿಯಾಗಿಲ್ಲ. ನಂತರ ಮುಂಗಾರು ಏಕಾಏಕಿ ಸುರಿದಿದ್ದರಿಂದ ಕಾಫಿಯೊಂದಿಗೆ ಮೆಣಸಿನ ಫಸಲು ನೆಲ ಸೇರಿತ್ತು. ಈಗ ಉಳಿದ ಫಸಲು ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಬಾಳೆಹಳ್ಳ ವಿರೂಪಾಕ್ಷ ತಿಳಿಸಿದರು.
‘ಸೋನೆ ಮಳೆ ಹಾಗೂ ಮೋಡ ಕವಿದ ವಾತಾವರಣ ಇರುವದರಿಂದ ಹಣ್ಣು ಕಾಫಿಯನ್ನು ಕೊಯ್ಲು ಮಾಡಿ, ಒಣಗಿಸಲು ಸಾಧ್ಯವಾಗುತ್ತಿಲ್ಲ. ಪಲ್ಪರ್ ಮಾಡಿದ ಕಾಫಿಯನ್ನು ಒಣಗಿಸದೇ ಇದ್ದರೆ ಬೀಜ ಕಪ್ಪು ಬಣ್ಣಕ್ಕೆ ತಿರುಗಿ ಬೇಡಿಕೆ ಕಳೆದುಕೊಳ್ಳುತ್ತದೆ’ ಎಂದು ಬೆಳೆಗಾರರು ಅಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.