ADVERTISEMENT

ಚನ್ನಪಟ್ಟಣ ಕೆರೆ ಅಂಗಳ ಅಭಿವೃದ್ಧಿಗೆ ಅನುಮತಿ ನೀಡಿ

ಯೋಜನೆಯಲ್ಲಿ ಲೋಪವಿದ್ದರೆ ಸರಿಪಡಿಸಿ: ಶಾಸಕ ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 13:09 IST
Last Updated 2 ಜನವರಿ 2021, 13:09 IST
ಚನ್ನಪಟ್ಟಣ ಕೆರೆ ಅಂಗಳದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ದಪಡಿಸಿರುವ ನೀಲನಕ್ಷೆ ಬಗ್ಗೆ ಶಾಸಕ ಎಚ್.ಡಿ.ರೇವಣ್ಣ ಮಾಹಿತಿ ನೀಡಿದರು.
ಚನ್ನಪಟ್ಟಣ ಕೆರೆ ಅಂಗಳದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ದಪಡಿಸಿರುವ ನೀಲನಕ್ಷೆ ಬಗ್ಗೆ ಶಾಸಕ ಎಚ್.ಡಿ.ರೇವಣ್ಣ ಮಾಹಿತಿ ನೀಡಿದರು.   

ಹಾಸನ: ನಗರದ ಹೃದಯಭಾಗದಲ್ಲಿರುವ ಚನ್ನಪಟ್ಟಣ ಕೆರೆ ಅಂಗಳದಲ್ಲಿ ಕೈಗೊಳ್ಳಲು ಉದ್ದೇಶಿಸಿರುವವಿಹಾರಧಾಮ ಅಭಿವೃದ್ಧಿ ಮತ್ತು ಉದ್ಯಾನ ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡದಿದ್ದರೆಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಎಚ್.ಡಿ.ರೇವಣ್ಣ ಎಚ್ಚರಿಸಿದರು.

ಹಾಸನ ಜಿಲ್ಲೆಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ₹144 ಕೋಟಿ ವೆಚ್ಚದಲ್ಲಿ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ ನೀಡಿ, ಬಜೆಟ್‌ನಲ್ಲಿ ₹36 ಕೋಟಿ ಅನುದಾನ ಮೀಸಲಿರಿಸಲಾಗಿತ್ತು. ಆದರೆ, ಸ್ಥಳೀಯ ಶಾಸಕ ಪ್ರೀತಂ ಗೌಡ ಪತ್ರ ಬರೆದಕಾರಣ ಸರ್ಕಾರ ಯೋಜನೆಗೆ ತಡೆ ನೀಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹತ್ತು ವರ್ಷಗಳಿಂದ ಕೆರೆ ಪಾಳು ಬಿದ್ದಿದೆ. ಜೈಪುರದ ಸಿನ್ಸಿಯರ್‌ ಅರ್ಕಿಟೆಕ್ಟ್ಸ್‌ ಎಂಜಿನಿಯರ್‌ ಪ್ರವೈಟ್‌ ಲಿಮೆಟೆಡ್‌ ಸಂಸ್ಥೆಯು ₹88.50 ಲಕ್ಷ ವೆಚ್ಚದಲ್ಲಿ ನೀಲ ನಕ್ಷೆ ತಯಾರಿಸಿದೆ. 53 ಎಕರೆ ಪ್ರದೇಶದಲ್ಲಿ ಆಧುನಿಕ ಮಾದರಿಯ ವಿಹಾರಧಾಮ, ಸುತ್ತಲಿನ ರಸ್ತೆಗಳ ಅಭಿವೃದ್ಧಿ, ಸೇತುವೆ, ಉದ್ಯಾನ, ಕಾರಂಜಿ ನಿರ್ಮಾಣ, ದೋಣಿ ವಿಹಾರ, ಮಕ್ಕಳ ರೈಲು ಅಳವಡಿಕೆ, ವಾಟರ್‌ ಪಾರ್ಕ್‌ ಸೇರಿದಂತೆ ಹಲವು ಕಾಮಗಾರಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಜಾಗವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ವಿವರಿಸಿದರು.

ADVERTISEMENT

ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಹಾಸನ ನಗರಸಭೆ ಸದಸ್ಯರು ಹಾಗೂ ಸಂಘ ಸಂಸ್ಥೆಗಳು ಪತ್ರ ಬರೆದು ಯೋಜನೆ ಮುಂದುವರೆಸುವಂತೆ ಮನವಿ ಮಾಡಿವೆ. ಯೋಜನೆಯಲ್ಲಿ ಲೋಪವಿದ್ದರೆ ಸರಿಪಡಿಸಿ, ತಮಗೆ ಬೇಕಾದವರಿಗೆ ಗುತ್ತಿಗೆ ನೀಡಲಿ. ನಗರದ ಇತರೆ ಕೆರೆ ಹಾಗೂ ಉದ್ಯಾನಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರಲಿ. ಆದರೆ, ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಮೀಸಲಿರಿಸಿದ್ದ ಅನುದಾನ ಬಳಸುವುದು ಸರಿಯಲ್ಲ. ದ್ವೇಷದ ರಾಜಕಾರಣ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ಪ್ರಮುಖ ಯೋಜನೆಗಳನ್ನು ತಡೆ ಹಿಡಿದರೆ ಹೋರಾಟ ಮಾಡಲಾಗುವುದು. ಮೂಲ ಯೋಜನೆಯನ್ನು ಅನುಷ್ಠಾನ ಮಾಡಬೇಕು. ಕಾಮಗಾರಿಗಳನ್ನು ತಡೆ ಹಿಡಿಯುವುದಾದರೆ ನಿತ್ಯ ಅರ್ಜಿ ಬರೆಯಬಹುದಿತ್ತು.ಹಣ ಮಾಡುವ ದುರುದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಬಿಜೆಪಿ ಶಾಸಕರಿಗೆ ಪ್ರಾಕ್ಟಿಕಲ್ ಅನುಭವವಿಲ್ಲ. ಜಿಲ್ಲೆಯಲ್ಲಿ ಏನೇನು‌ ನಡೆಯುತ್ತಿದೆ ಎಂಬುದು ಗೊತ್ತಿದೆ. 2023 ಕ್ಕೆ ಜೆಡಿಎಸ್ ಅಧಿಕಾರಕ್ಕೆ ತರದಿದ್ದರೆ ರಾಜಕೀಯದಲ್ಲಿ ಇರುವುದಿಲ್ಲ ಎಂದರು.

ದೇವೇಗೌಡರಿಗೆ ರಾಜಕೀಯ ಶಕ್ತಿ ನೀಡಿದ ಜಿಲ್ಲೆಯ ಜನರ ಋಣ ಇದೆ. ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಅಧಿಕಾರಿಗಳು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.