ADVERTISEMENT

ಹಾಸನ | ಮೀನುಗಳ ಸಾವು: ನೀರಿಗೆ ವಿಷ ಪ್ರಾಶನ ಶಂಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 13:14 IST
Last Updated 25 ಏಪ್ರಿಲ್ 2020, 13:14 IST
ಅರಕಲಗೂಡು ತಾಲ್ಲೂಕು ಚಿಕ್ಕಗಾವನಹಳ್ಳಿಯ ಕೆರೆ ಬಳಿ ಗುಡ್ಡೆ ಹಾಕಿದ ಸತ್ತ ಮೀನುಗಳು
ಅರಕಲಗೂಡು ತಾಲ್ಲೂಕು ಚಿಕ್ಕಗಾವನಹಳ್ಳಿಯ ಕೆರೆ ಬಳಿ ಗುಡ್ಡೆ ಹಾಕಿದ ಸತ್ತ ಮೀನುಗಳು   

ಅರಕಲಗೂಡು (ಹಾಸನ ಜಿಲ್ಲೆ): ತಾಲ್ಲೂಕಿನ ಚಿಕ್ಕಗಾವನಹಳ್ಳಿಯ ಕೆರೆಯಲ್ಲಿ ನೂರಾರು ಮೀನುಗಳು ಮೃತಪಟ್ಟಿದ್ದು, ಕಿಡಿಗೇಡಿಗಳು ನೀರಿಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮಸ್ಥರು ಒಟ್ಟಾಗಿ, ಕಳೆದ ವರ್ಷ ಸುಮಾರು ₹ 30 ಸಾವಿರ ವ್ಯಯಿಸಿ ವಿವಿಧ ತಳಿಯ ಮೀನು ಮರಿಗಳನ್ನು ಕೆರೆಗೆ ಬಿಟ್ಟಿದ್ದರು. ಬೆಳವಣಿಗೆ ಹಂತದಲ್ಲಿದ್ದ ಮೀನುಗಳು ಸಾಯುತ್ತಿದ್ದು, ಆತಂಕಕ್ಕೆ ಒಳಗಾಗಿದ್ದಾರೆ.

ಕೆರೆಯಲ್ಲಿ ಸುಮಾರು‌ 40 ಸಾವಿರ ಮೀನು ಮರಿಗಳನ್ನು ಬಿಡಲಾಗಿತ್ತು. ಆದರೆ, ಎರಡು ದಿನಗಳ ಹಿಂದೆ ನೀರಿಗೆ ಕಳೆನಾಶಕ ಹಾಕಿರುವ ಸಂದೇಹವಿದ್ದು, ಸತ್ತ ಮೀನುಗಳು ದಡಕ್ಕೆ ಬಂದು ಬೀಳುತ್ತಿವೆ.

ADVERTISEMENT

‘ಇನ್ನು ಎರಡು ದಿನ ಕಳೆದರೆ ಒಂದು ಮೀನು ಕೂಡ ಉಳಿಯುವುದಿಲ್ಲ. ಲಾಕ್‌ಡೌನ್‌ನಿಂದಾಗಿ ಜನರು ಮೊದಲೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು ಇದೀಗ ಕೆರೆಯಲ್ಲಿದ್ದ ಜೀವಂತ ಮೀನುಗಳನ್ನೂ ಕಳೆದುಕೊಂಡು ಚಿಂತಿತರಾಗಿದ್ದೇವೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರ್‌ ವೈ.ಎಂ.ರೇಣುಕುಮಾರ್ ಹಾಗೂ ಕಂದಾಯ ನಿರೀಕ್ಷಕ ಎಚ್.ಎಂ.ಶಿವಕುಮಾರ್, ‘ಕೆರೆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.