ಅರಕಲಗೂಡು ತಾಲ್ಲೂಕು ಬೈಚನಹಳ್ಳಿ ಕೃಷಿಕ ದಯಾನಂದ ಅವರ ಜಮೀನಿನಲ್ಲಿ ಬುಧವಾರ ಆಲೂಗೆಡ್ಡೆ ಬೆಳೆ ಕ್ಷೇತ್ರೋತ್ಸವ ನಡೆಯಿತು
ಅರಕಲಗೂಡು: ಬೆಳೆ ಹವಾಮಾನ ವೈಪರಿತ್ಯ ಹಾಗೂ ರೋಗ ಬಾಧೆಗೆ ತುತ್ತಾಗಿ ಆಲೂಗೆಡ್ಡೆ ಕ್ಷೀಣಿಸುತ್ತಿದ್ದು, ರೈತರು ಹೊಸ ತಳಿ ಆಯ್ಕೆ ಮಾಡಿಕೊಂಡು ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳುವತ್ತ ಚಿಂತನೆ ನಡೆಸಬೇಕು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ರಾಜೇಶ್ ತಿಳಿಸಿದರು.
ತಾಲ್ಲೂಕಿನ ಬೈಚನಹಳ್ಳಿಯ ರೈತ ದಯಾನಂದ್ ಅವರ ಜಮೀನಿನಲ್ಲಿ ಬುಧವಾರ ನಡೆದ ಕ್ಷೇತ್ರೋತ್ಸವದಲ್ಲಿ ಆಲೂಗೆಡ್ಡೆ ಬೆಳೆ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು.
‘50 ವರ್ಷಗಳಿಂದ ರೈತರು ಜ್ಯೋತಿ ತಳಿಯೊಂದನ್ನೇ ಬೆಳೆಯುತ್ತಿದ್ದು, ಈ ತಳಿಯ ಸಾಮರ್ಥ್ಯ ಹಿಂದಿನಂತೆ ಇಲ್ಲದೆ ಕ್ಷೀಣಿಸಿದೆ. ಹೀಗಾಗಿ ಬಹು ಬೇಗ ರೋಗಬಾಧೆಗೆ ತುತ್ತಾಗಿ ಬೆಳೆಗಾರರ ಕೈಸುಡುತ್ತಿದೆ. ರೈತ ದಯಾನಂದ್ ಅವರು ಕುಡಿಕಾಂಡ ಆಲೂ ಸಸಿಗಳ ಮೂಲಕ ಕುಫ್ರಿ ಕರಣ್ ತಳಿಯ ಬೀಜೋತ್ಪಾದನೆ ಮಾಡಿ ಬೆಳೆದಿರುವ ಬೆಳೆ ಇತರೆ ತಳಿಗಳಿಗಿಂತ ಉತ್ತಮವಾಗಿದ್ದು, ರೋಗ ಬಾಧೆಯನ್ನು ಎದುರಿಸುವ ಶಕ್ತಿ ಹೊಂದಿದೆ’ ಎಂದರು.
ರೈತ ದಯಾನಂದ್ ಮಾತನಾಡಿ, ‘ಆಲೂಗೆಡ್ಡೆಯನ್ನು ಸಸಿಗಳಿಂದ ಬೀಜೋತ್ಪಾದನೆ ಮಾಡಬಹುದೆಂಬ ತಂತ್ರಜ್ಞಾನ ತಿಳಿದಿರಲಿಲ್ಲ. ಹಾಸನದ ಸೋಮನಹಳ್ಳಿ ಕಾವಲ್ನಲ್ಲಿ ನಡೆದ ರೈತ ತರಬೇತಿ ಕಾರ್ಯಾಗಾರದಲ್ಲಿ ವಿಷಯ ತಿಳಿದು ಇದನ್ನು ತಮ್ಮ ಜಮೀನಿನಲ್ಲಿ ಪ್ರಯೋಗಿಸಿದ ಫಲವಾಗಿ ಉತ್ತಮ ಆಲೂ ಬೆಳೆದಿದ್ದೇನೆ’ ಎಂದು ಅನುಭವ ಹಂಚಿಕೊಂಡರು.
ಸಿರಿ ಆಲೂಗಡ್ಡೆ ಸಂಸ್ಥೆಯ ವ್ಯವಸ್ಥಾಪಕ ರವೀಂದ್ರ ರೆಡ್ಡಿ, ಉಪವ್ಯವಸ್ಥಾಪಕ ಸುಹಾಸ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವಾಜಿದ್, ಗ್ರಾಪಂ ಸದಸ್ಯ ಕುಮಾರ್, ಮುಖಂಡರಾದ ಶ್ರೀನಿವಾಸ್, ಕುಮಾರ್, ರಘು, ಸುಬ್ಬೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.