ADVERTISEMENT

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ ಗುಂಡಿಮಯ- ದುರಸ್ತಿಗೆ ಆಗ್ರಹ

ಸಕಲೇಶಪುರದಿಂದ ಹೆಗ್ಗದ್ದೆವರೆಗೆ ಹದಗೆಟ್ಟ ರಸ್ತೆ

ಜಾನೆಕೆರೆ ಆರ್‌.ಪರಮೇಶ್‌
Published 21 ಜೂನ್ 2021, 5:39 IST
Last Updated 21 ಜೂನ್ 2021, 5:39 IST
ಸಕಲೇಶಪುರ ತಾಲ್ಲೂಕಿನ ಎತ್ತಿನಹಳ್ಳ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿರುವುದು (ಎಡಚಿತ್ರ). ತಾಲ್ಲೂಕಿನ ಕೆಸಗಾನಹಳ್ಳಿ ಗ್ರಾಮದ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ
ಸಕಲೇಶಪುರ ತಾಲ್ಲೂಕಿನ ಎತ್ತಿನಹಳ್ಳ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿರುವುದು (ಎಡಚಿತ್ರ). ತಾಲ್ಲೂಕಿನ ಕೆಸಗಾನಹಳ್ಳಿ ಗ್ರಾಮದ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ   

ಸಕಲೇಶಪುರ: ಪಟ್ಟಣದಿಂದ ಹೆಗ್ಗದ್ದೆವರೆಗಿನಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಲ್ಲಲ್ಲಿ ಗುಂಡಿ ಬಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನೀರಿನಲ್ಲಿ ರಸ್ತೆಯ ಜಲ್ಲಿ, ಮಣ್ಣು ಕೊಚ್ಚಿಹೋಗುತ್ತಿದೆ. ಈ ಮಾರ್ಗದಲ್ಲಿ ಭಾರಿ ಸರಕು ಸಾಗಣೆ ಲಾರಿಗಳು, ಅನಿಲ ಟ್ಯಾಂಕರ್‌ಗಳ ಸಂಚಾರಕ್ಕೆ ತೊಡಕಾಗಿದೆ.

ದ್ವಿಚಕ್ರ ವಾಹನ ಹಾಗೂ ಕಾರುಗಳ ಓಡಾಟಕ್ಕೂ ಅಡ್ಡಿಯಾಗಿದೆ. ವಾರದಿಂದ ಮಳೆ ಸುರಿಯುತ್ತಿರುವುದರಿಂದ ಹೆದ್ದಾರಿಯಲ್ಲಿ ದೊಡ್ಡ ಗುಂಡಿಗಳಾಗಿವೆ. ಆಳ ಗೊತ್ತಾಗದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಮಾಡಿಕೊಳ್ಳುವಂತಾಗಿದೆ.

ADVERTISEMENT

‘ಕಾರುಗಳ ಎಂಜಿನ್‌ ಹಾಗೂ ಚಾರ್ಸಿಗಳಿಗೂ ಸಹ ಹಾನಿ ಉಂಟಾಗಿದೆ. ಮಾರ್ಗ ಮಧ್ಯದಲ್ಲಿಯೇ ವಾಹನ‌ಗಳು ಕೆಟ್ಟುನಿಂತು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ’ ಎಂದು ಭೀಮೇಶ್ವರ ಎಸ್ಟೇಟ್‌ ಮಾಲೀಕ ವಿಜಯಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾಸನ–ಬಿ.ಸಿ. ರಸ್ತೆ ನಡುವೆಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. 2017ರಲ್ಲಿಯೇ ಗುತ್ತಿಗೆ ಪಡೆದ ಕಂಪನಿ, 2019 ಮಾರ್ಚ್‌ 31ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಿಕೊಡಬೇಕಿತ್ತು‌. ಇದುವರೆಗೂ ಶೇ 50 ರಷ್ಟು ಕಾಮಗಾರಿ ನಡೆದಿಲ್ಲ. ಕಾಮಗಾರಿ ವಿಳಂಬದಿಂದಾಗಿ ಹಾಸನದಿಂದ ಮಂಗಳೂರುವರೆಗೆ ಹೆದ್ದಾರಿಯಲ್ಲಿ ವಾಹನ ಓಡಿಸುವುದಕ್ಕೆ ಕಷ್ಟವಾಗುತ್ತಿದೆ’ ಎಂದು ಲಾರಿ ಮಾಲೀಕ ಸುಹೀಲ್‌ ಮಣಿಹೇಳುತ್ತಾರೆ.

ಗುಂಡಿ ಮುಚ್ಚಲಾಗುವುದು: ‘ನಿರಂತರ ಮಳೆ ಆಗುತ್ತಿರುವುದರಿಂದ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಕಷ್ಟವಾಗುತ್ತಿದೆ. ಮಳೆ ಬಿಡುವು ನೀಡಿದ ಕೂಡಲೇ ಹಂತಹಂತವಾಗಿ ಗುಂಡಿ ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಜನಾರ್ದನ್‌ಹೇಳುತ್ತಾರೆ.

‘ಗುಂಡಿಬಿದ್ದು ಹಾಳಾಗಿರುವ ಹಾಸನ–ಹೆಗದ್ದೆ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ವಾಹನಗಳ ಸಂಚಾರಕ್ಕೆ ಸಮಸ್ಯೆ ಇಲ್ಲದಂತೆ ಕೂಡಲೇ ದುರಸ್ತಿ ಮಾಡದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಾಳ್ಳು ದಿನೇಶ್‌ ಎಚ್ಚರಿಕೆ
ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.