ಹೊಳೆನರಸೀಪುರ: ‘ನಮ್ಮ ಮನೆಯಲ್ಲಿ ಬಡತನ. ಚೆನ್ನಾಗಿ ಓದಬೇಕು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಬೇಕು ಎಂದು ಕೊಂಡಿದ್ದ ನನಗೆ ಪುಸ್ತಕದಲ್ಲಿ ಇದ್ದ ಮಾಹಿತಿ ಸಾಕಾಗುತ್ತಿರಲಿಲ್ಲ. ಹಿರಿಯರ ಸಲಹೆ ಮೇರೆಗೆ ಪ್ರಜಾವಾಣಿ ಪತ್ರಿಕೆ ನಿರಂತರ ಓದಲು ಪ್ರಾರಂಭಿಸಿದೆ. ನನಗೆ ಬೇಕಾದ ಎಲ್ಲಾ ಮಾಹಿತಿ ಪ್ರಜಾವಾಣಿಯಲ್ಲಿ ಸಿಕ್ಕಿದ್ದರಿಂದ ನಾನು ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗಲು ಸಹಕಾರಿ ಆಯಿತು’ ಎಂದು ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ನುಡಿದರು.
ಸೋಮವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ‘ಪ್ರಜಾವಾಣಿ ಕ್ವಿಜ್’ನ ಪ್ರಚಾರ ಫಲಕ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಪ್ರಜಾವಾಣಿ ಅತ್ಯಂತ ನಿಖರವಾದ ಸುದ್ದಿಯನ್ನು ನೀಡುತ್ತಿದ್ದು ಲಕ್ಷಾಂತರ ಮನೆ ಮಾತಾಗಿದೆ’ ಎಂದರು.
ಡಿ.ವೈ.ಎಸ್. ಪಿ ಲಕ್ಷ್ಮೇಗೌಡ ಮಾತನಾಡಿ, ‘1973ರಲ್ಲಿ ನನಗೆ ಕ್ರಿಕೆಟ್ ಎಂದರೆ ತುಂಬಾ ಅಚ್ಚು ಮೆಚ್ಚಿನ ಆಟ. ಆ ದಿನದಲ್ಲಿ ಪ್ರಜಾವಾಣಿಯ ಕ್ರೀಡಾಪುಟ ಪ್ರಪಂಚದ ಕ್ರಿಕೆಟ್ ಆಟಗಾರರನ್ನು ಪರಿಚಯಿಸುತ್ತಿತ್ತು. ಪತ್ರಿಕೆ ಕೊಳ್ಳಲು ಶಕ್ತಿ ಇಲ್ಲದ ನಾನು ಬೆಳಿಗ್ಗೆ ಬೇಗ ಎದ್ದು ಅವರಿವರ ಅಂಗಡಿ ಮುಂದೆ ಹಾಕಿರುತ್ತಿದ್ದ ‘ಪ್ರಜಾವಾಣಿ’ಯನ್ನು ತೆಗೆದುಕೊಂಡು ಓದಿ ಮತ್ತೆ ಅಲ್ಲೇ ಇಟ್ಟು ಬರುತ್ತಿದ್ದೆ. ಪ್ರತಿದಿನ ಪತ್ರಿಕೆಯಲ್ಲಿನ ಎಲ್ಲ ವಿಷಯಗಳನ್ನು ಓದುತ್ತಿದ್ದ ನನಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮನಸ್ಸಾಯಿತು, ಬರೆದು ಪಾಸಾದೆ. ನನ್ನ ಯಶಸ್ಸಿನ ಹಿಂದೆ ಪ್ರಜಾವಾಣಿ ಇದೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ. ಯೋಗೇಶ್, ಜಿ.ಪಂ. ಎಇಇ ಪ್ರಭು, ತೋಟಗಾರಿಕೆ ಇಲಾಖೆ ಅಧಿಕಾರಿ ಭವ್ಯಾ, ಅಬಕಾರಿ ಇಲಾಖೆ ಅಧಿಕಾರಿ ಶಂಕರಪ್ಪ, ಕೃಷಿ ಅಧಿಕಾರಿ ನಟರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಲಿಂಗು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಕೆ. ಕುಮಾರಯ್ಯ, ಎಸ್.ಎನ್. ನಾಗರಾಜು ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.