ADVERTISEMENT

ಪತ್ರಿಕೋದ್ಯಮದಲ್ಲಿ ಮುದ್ರಣ ಮಾಧ್ಯಮ ಶಾಶ್ವತ: ಕೆ.ಎಂ. ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 1:55 IST
Last Updated 3 ಆಗಸ್ಟ್ 2025, 1:55 IST
ಹಾಸನದಲ್ಲಿ ನಡೆದ ಮಾಧ್ಯಮ ದಿನಾಚರಣೆಯಲ್ಲಿ ಎಸ್‌.ಆರ್‌. ಪ್ರಸನ್ನಕುಮಾರ್‌, ಕೆ.ಆರ್‌.ಮಂಜುನಾಥ, ಡಿ.ಜೆ. ರಾಜಗೋಪಾಲ್‌ ಅವರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಭಾಗವಹಿಸಿದ್ದರು
ಹಾಸನದಲ್ಲಿ ನಡೆದ ಮಾಧ್ಯಮ ದಿನಾಚರಣೆಯಲ್ಲಿ ಎಸ್‌.ಆರ್‌. ಪ್ರಸನ್ನಕುಮಾರ್‌, ಕೆ.ಆರ್‌.ಮಂಜುನಾಥ, ಡಿ.ಜೆ. ರಾಜಗೋಪಾಲ್‌ ಅವರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಭಾಗವಹಿಸಿದ್ದರು   

ಹಾಸನ: ಡಿಜಿಟಲ್ ಮಾಧ್ಯಮ ಎಷ್ಟೇ ಎತ್ತರಕ್ಕೆ ಬೆಳೆದರೂ, ಮುದ್ರಣ ಮಾಧ್ಯಮ ಶಾಶ್ವತವಾಗಿ ಉಳಿಯಲಿದೆ ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷ‌, ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಮಾಧ್ಯಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮುದ್ರಣ ಮಾಧ್ಯಮ ಶಾಶ್ವತವಾಗಿ ಉಳಿಯಲಿದೆ. ಡಿಜಿಟಲ್ ಮಾಧ್ಯಮದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಸ್ಪಷ್ಟವಲ್ಲದ ಮಾಹಿತಿಯನ್ನು ಹೆಚ್ಚು ಬಿತ್ತರಿಸಲಾಗುತ್ತಿದ್ದು, ಇಂದಿಗೂ ನಾನು ಬೇಸಿಕ್ ಮೊಬೈಲ್ ಫೋನ್‌ ಬಳಸುತ್ತಿದ್ದೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ಪತ್ರಿಕೆ ನಡೆಸುವುದು ಸುಲಭದ ಮಾತಲ್ಲ. ಪತ್ರಿಕೋದ್ಯಮ, ಪತ್ರಿಕಾ ಪ್ರತಿನಿಧಿಗಳ ವರ್ಗವೇ ಬೇರೆ. ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ಚರ್ಚೆ ಮಾಡಿದ್ದೇನೆ. ಎಲ್ಲ ಪತ್ರಕರ್ತರಿಗೆ ಉಚಿತ ನಿವೇಶನ ಒದಗಿಸುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಚರ್ಚೆ ಆಗಬೇಕು. ಮುಂದಿನ ದಿನದಲ್ಲಿ ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸುವ ಮೂಲಕ ಕಾರ್ಯಗತ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಪತ್ರಕರ್ತ ರವಿ ಹೆಗಡೆ, ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ್ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎಚ್.ಬಿ. ಮದನಗೌಡರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಂ. ಹರೀಶ್ ಸ್ವಾಗತಿಸಿದರು. ಉಪಾಧ್ಯಕ್ಷ ಮೋಹನ್‌ಕುಮಾರ್ ಎಚ್.ಟಿ. ವಂದಿಸಿದರು.

ಐಎಫ್‌ಡಬ್ಲ್ಯುಜೆ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ರವಿ ನಾಕಲಗೂಡು, ಬಾಳ್ಳು ಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣೇಗೌಡ, ಹಿರಿಯ ವಾರ್ತಾಧಿಕಾರಿ ಮೀನಾಕ್ಷಮ್ಮ, ಪದಾಧಿಕಾರಿಗಳು, ಪತ್ರಕರ್ತರು ಭಾಗವಹಿಸಿದ್ದರು.

ಒಂದು ದೇಶ ಒಂದೇ ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಈ ಕುರಿತು ಮುದ್ರಣ ಮಾಧ್ಯಮಗಳು ಸಂಪಾದಕೀಯದಲ್ಲಿ ಬೆಳಕು ಚೆಲ್ಲಬೇಕು
ಕೆ.ಎಂ. ಶಿವಲಿಂಗೇಗೌಡ ಶಾಸಕ
ಅಭಿಪ್ರಾಯ ಹೇರುವ ಪ್ರವೃತ್ತಿ ಬೇಡ
ಇತ್ತೀಚಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ಫೋನ್‌ ಹೊಂದಿದವರೆಲ್ಲ ಪತ್ರಕರ್ತರಾಗಿದ್ದಾರೆ. ಸುದ್ದಿಯ ವಿಶ್ಲೇಷಣೆ ಮಾಡದೇ ಸಾಮಾಜಿಕ ಜಾಲತಾಣದಲ್ಲಿ ಬಿತ್ತರ ಮಾಡುವುದು ಸಾಮಾನ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ಸುದ್ದಿಗಳ ಬದಲಾಗಿ ಅಭಿಪ್ರಾಯಗಳನ್ನು ಹೇರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮೊಬೈಲ್ ಮೂಲಕ ತಮಗೆ ಬೇಕಾದ ವರದಿ ಬಿತ್ತರಿಸಲಾಗುತ್ತಿದ್ದು ಉತ್ತಮ ಪತ್ರಿಕೋದ್ಯಮಕ್ಕೆ ಇದು ದೊಡ್ಡ ಬೆದರಿಕೆಯಾಗಿದೆ ಎಂದು ಎಚ್ಚರಿಸಿದರು. ಶಾಸಕ ಶಿವಲಿಂಗೇಗೌಡರ ಕಾರ್ಯವೈಖರಿ ಶ್ಲಾಘಿಸಿದ ಜಿಲ್ಲಾಧಿಕಾರಿ ಸದನದಲ್ಲಿ ಗ್ರಾಮೀಣ ಸೊಗಡಿನಲ್ಲಿಯೇ ಮಾತನಾಡುತ್ತಾರೆ. ವಿಶ್ಲೇಷಣೆ ಮಾಡುವ ಅವರ ಮಾತುಗಳು ನಿಜಕ್ಕೂ ವಿಶೇಷ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.