ಅರಸೀಕೆರೆ: ‘ಜಿಲ್ಲೆಗೆ ಸೆಪ್ಟೆಂಬರ್ 21ರಂದು ಆಗಮಿಸುತ್ತಿರುವ ಬಸವ ಸಾಂಸ್ಕೃತಿಕ ರಥವನ್ನು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳುವುದರ ಜತೆಗೆ ಬಸವ ತತ್ವ ಜಗತ್ತಿಗೆ ಸಾರೋಣ’ ಎಂದು ಹಳೇಬೀಡು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ನಗರದ ವಿವೇಕಾನಂದ ಬಿಎಡ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಾದಿ ಶರಣರು ತತ್ವ ಸಿದ್ಧಾಂತದ ಮೂಲಕ ಕ್ರಾಂತಿ ಮಾಡಿದರೆ ಪ್ರಸ್ತುತ ನಾವು ಅವರ ವಿಚಾರಧಾರೆಯ ಕ್ರಾಂತಿ ಮಾಡುವ ಮೂಲಕ ಬಸವಣ್ಣನ ತತ್ವ ಸಿದ್ಧಾಂತ ಜಗತ್ತಿಗೆ ಸಾರಬೇಕಿದೆ ಎಂದರು.
ಹಾಸನದಲ್ಲಿ ನಡೆಯುತ್ತಿರುವ ವಿಶ್ವಗುರು ಜಗಜ್ಯೋತಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮವು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಲಿ ಎಂಬ ಆಶಯದೊಂದಿಗೆ ಜಿಲ್ಲೆಯ ಎಲ್ಲಾ ಮಠಾಧೀಶರ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಅನುಯಾಯಿಗಳು ಪಾಲ್ಗೊಳ್ಳಬೇಖು ಎಂದರು.
ಸಭೆಯಲ್ಲಿ ಮೂರು ಕಳಸ ಮಠದ ಜ್ಞಾನ ಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ, ಮಾಡಾಳು ನಿರಂಜನ ಮಠದ ರುದ್ರಮುನಿ ಸ್ವಾಮೀಜಿ, ಗೋಳಗುಂದ ಕೆದಿಗೆ ಮಠದ ಚಂದ್ರಶೇಖರ ಸ್ವಾಮೀಜಿ,ಡಿ ಎಂ ಕುರ್ಕೆ ವಿರಕ್ತಮಠದ ಚಂದ್ರಶೇಖರ ಸ್ವಾಮೀಜಿ,ಮಾರಗೊಂಡನಹಳ್ಳಿ ವಿರಕ್ತಮಠದ ಅಭಿನಂದನ ಬಸವಲಿಂಗ ಸ್ವಾಮೀಜಿ ಮಾತನಾಡಿದರು.
ಸಮಾರಂಭದಲ್ಲಿ ವೀರಶೈವ ಲಿಂಗಾಯಿತ ಸಮಾಜ ಮುಖಂಡರಾದ ಶಶಿಧರ್, ಜಿವಿಟಿ ಬಸವರಾಜ್, ದಿವಾಕರ್ ಬಾಬು, ಬಿಜಿ ನಿರಂಜನ್, ಜೀಪಂ ಮಾಜಿ ಸದಸ್ಯ ಸ್ವಾಮಿ, ದೇಶಾಣಿ ಆನಂದ್, ಅರುಣ್ ಕುಮಾರ್, ಮಂಜುನಾಥ್, ಮಹೇಂದ್ರ ಮುರುಂಡಿ ಶಿವಯ್ಯ, ಸಹಕಾರ ರತ್ನ ಸಿದ್ದಪ್ಪ ಓಂಕಾರ ಮೂರ್ತಿ, ವಿಜಿ ಕುಮಾರ್ ಯಾದಾಪುರ ತೇಜಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.