
ಬೇಲೂರು: ಬೇಲೂರಿನಿಂದ-ಚಿಕ್ಕಮಗಳೂರಿಗೆ ತೆರಳಲು ಸರಿಯಾದ ಸಮಯಕ್ಕೆ ಬಸ್ ಬಿಡುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ನೌಕರರು ಇಲ್ಲಿನ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬಸ್ಗಳನ್ನು ತಡೆದು ಪ್ರತಿಭಟಿಸಿದರು.
ವಿದ್ಯಾರ್ಥಿ ಮನೋಜ್ ಕುಮಾರ್ ಮಾತನಾಡಿ, ಬೇಲೂರಿನಿಂದ ಪ್ರತಿನಿತ್ಯ ಬೆಳಗಿನ ಸಮಯ ನೂರಾರು ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರಯಾಣಿಸುತ್ತೇವೆ. ಆದರೆ ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ, ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಶಾಸಕರ ಗಮನಕ್ಕೆ ತಂದಾಗ ಅವರೂ ಡಿಪೊ ವ್ಯವಸ್ಥಾಪಕರಿಗೆ ಫೋನ್ ಮಾಡಿ ಹೇಳಿದರೂ ಅವರ ಮಾತಿಗೂ ಬೆಲೆ ನೀಡದೆ ಉಡಾಫೆಯಿಂದ ವರ್ತಿಸುತಿದ್ದಾರೆ ಎಂದು ಆರೋಪಿಸಿದರು.
ಡಿಪೊ ವ್ಯವಸ್ಥಾಪಕ ಅನುಕುಮಾರ್ ಮಾತನಾಡಿ, ಬೇಲೂರು ಬಸ್ ನಿಲ್ದಾಣದಿಂದ ಚಿಕ್ಕಮಗಳೂರಿಗೆ ಬೆಳಿಗ್ಗೆ 7.30ರಿಂದ 8.30ರ ವರೆಗೆ ಹಾಸನದಿಂದ ಚಿಕ್ಕಮಗಳೂರಿಗೆ ತೆರಳುವ ಐದು ಬಸ್ಗಳು ಹೋಗುತ್ತವೆ, ಆದರೆ ಶುಕ್ರವಾರ ಬೆಳಿಗ್ಗೆ ಮಾತ್ರ ಈ ಸಮಯದೊಳಗೆ ಬಸ್ಗಳು ಬರುವುದು ತಡವಾಗಿದೆ, ಎಲ್ಲ ಬಸ್ಗಳು 8.30ಕ್ಕೆ ನಿಲ್ದಾಣಕ್ಕೆ ಬಂದಿದ್ದರಿಂದ ಸಮಸ್ಯೆಯಾಗಿದೆ. ಶನಿವಾರದಿಂದ ವಿದ್ಯಾರ್ಥಿಗಳ, ನೌಕರರ ಅನುಕೂಲಕ್ಕಾಗಿ ನಮ್ಮ ಡಿಪೊದಿಂದಲೇ 7.45ರಿಂದ 7.50ಕ್ಕೆ ಬಸ್ ಬಿಡುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಸುಮಾರು ಒಂದು ಗಂಟೆಗಳ ಕಾಲ ಯಾವುದೇ ಬಸ್ಗಳನ್ನು ಹೊರಹೋಗಲು ಬಿಡದ ಕಾರಣ ಪ್ರಯಾಣಿಕರು ಪರದಾಡಿದರು. ಶಾಸಕರು ಅಧಿಕಾರಿಗಳೊಂದಿಗೆ ಖುದ್ದಾಗಿ ಮಾತನಾಡಿ ಸೋಮವಾರದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದೂರವಾಣಿ ಮೂಲಕ ತಿಳಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.