ಆಲೂರು: ಕಸಬಾ ಮರಸು ಹೊಸಹಳ್ಳಿಯಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಮೀಸಲಿದ್ದ ಮತ್ತು ಉಳಿಕೆ ಸರ್ಕಾರಿ ಜಾಗದ ಅಳತೆಗೆ ಸ್ಥಳೀಯರು ಸೋಮವಾರ ಪ್ರತಿಭಟಿಸಿದ್ದರಿಂದ ತಹಶೀಲ್ದಾರ್ ಸ್ಥಳದಿಂದ ನಿರ್ಗಮಿಸಿದರು.
‘ಸರ್ವೆ ನಂಬರ್ 34ರಲ್ಲಿ ಅಳತೆ ನಡೆಯಬೇಕಾಗಿತ್ತು. ಆದರೆ, ಜಾಗದ ಹಕ್ಕಿಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅಳತೆ ಮಾಡಬಾರದು ಎಂದು ಸ್ಥಳೀಯರು ಪ್ರತಿಭಟಿಸಿದ್ದ ವಾಪಸು ಬಂದೆ’ ಎಂದು ತಹಶೀಲ್ದಾರ್ ಶಿರೀನ್ತಾಜ್ ತಿಳಿಸಿದರು.
ಪ್ರತಿಭಟನೆಯಲ್ಲಿದ್ದ ದೇವಪ್ಪ ಮಾತನಾಡಿ, ‘ಮೂರು ತಲೆಮಾರಿನಿಂದ 20 ಗುಂಟೆ ಜಮೀನನ್ನು ಸಾಗುವಳಿ ಮಾಡುತ್ತಿದ್ದೇವೆ. ಫಾರಂ 50, 53, 57ರಲ್ಲಿ ಅರ್ಜಿ ಹಾಕಿದ್ದರೂ ಮಂಜೂರು ಮಾಡಿಲ್ಲ. ಇದೀಗ ದಲಿತರ ಜಮೀನನ್ನು ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಬಳಸಲು ಮುಂದಾಗಿದ್ದಾರೆ.
ಮರಸು ಗ್ರಾಮಕ್ಕೆ ಸೇರಿದ ಜಮೀನಿಗೆ ಸಾಗುವಳಿ ಪತ್ರ ನೀಡಿದ್ದಾರೆ. ಮರಸು ಹೊಸಹಳ್ಳಿ ಗ್ರಾಮದ ಜಮೀನಿಗೆ ಹಕ್ಕು ಪತ್ರ ನೀಡುತ್ತಿಲ್ಲ. ಸ. ನಂ. 35 ರಲ್ಲಿ 12 ಎಕರೆ ಖಾಲಿ ಜಾಗವಿದೆ. ಅಲ್ಲಿ ಮಾರುಕಟ್ಟೆ ನಿರ್ಮಿಸದೆ, ದಲಿತರ ಜಮೀನು ಆಕ್ರಮಿಸುವುದೇಕೆ’ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಲಕ್ಷ್ಮಣ್, ರಮೇಶ್, ಈರೇಶ್, ಶಾಚಿತರಾಜು, ಸುಜಾತಾ, ಶೀಲಾವತಿ, ಲೋಲಾಕ್ಷಿ, ಜ್ಯೋತಿ, ಪದ್ಮಾ, ಶೋಭಾ, ಡೈಲಾ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.