ಹಾಸನ: ಅರಕಲಗೂಡು ತಾಲ್ಲೂಕಿನ ಗಂಗೂರು ಗ್ರಾಮದ ಜೀತ ವಿಮುಕ್ತ ಭೂಹೀನ ಪರಿಶಿಷ್ಟ ಜಾತಿ 101 ಕುಟುಂಬಗಳಿಗೆ ಕೃಷಿ ಭೂಮಿ ಮಂಜೂರು ಮಾಡಿ, ಶಾಶ್ವತ ಪುನರ್ವಸತಿ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ದಲಿತ ಮತ್ತು ಜನಪರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.
ಈ ಸಂಬಂಧ ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿರುವ ಸಂಘಟನೆಯ ರಾಜಶೇಖರ್, ಎಚ್.ಕೆ.ಸಂದೇಶ್, ಧರ್ಮೆಶ್, ರೂಪ ಹಾಸನ ಟಿ.ಆರ್.ವಿಜಯ್ ಕುಮಾರ್, ಪೃಥ್ವಿಎಂ.ಜಿ, ಎಚ್.ಆರ್.ನವೀನ್ಕುಮಾರ್, ಕೃಷ್ಣದಾಸ್, ‘ಜೀತವಿಮುಕ್ತಗೊಂಡು 27 ವರ್ಷ ಕಳೆದರೂಜಿಲ್ಲಾಡಳಿತ ಕೃಷಿ ಭೂಮಿಯನ್ನು ನೀಡದೆ, ಪುನರ್ವಸತಿ ಸೌಲಭ್ಯ ಕಲ್ಪಿಸದಿರುವುದು ಅತ್ಯಂತ ನಿರ್ಲಕ್ಷ್ಯ ಧೋರಣೆಯಾಗಿದೆ. ದಮನಿತ ಸಮುದಾಯ ಜೀವನ ನಿರ್ವಹಣೆ ಮಾಡಲು ಭೂಮಿ, ಉದ್ಯೋಗವಿಲ್ಲದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮತ್ತಷ್ಟು ಅಂಚಿಗೆ ಒತ್ತರಿಸಲ್ಪಟ್ಟು, ಶೋಚನೀಯ ಪರಿಸ್ಥಿತಿತಲುಪಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘27 ವರ್ಷಗಳಿಂದಲೂ ಪರಿಹಾರ ಕಾಣದ ಜೀತವಿಮುಕ್ತ ಕುಟುಂಬಗಳಿಗೆ ಸರ್ಕಾರ ತುರ್ತಾಗಿನ್ಯಾಯಯುತ ಪರಿಹಾರ ದೊರಕಿಸಿಕೊಡಲು ವಿಧಾನಸಭಾ ಅಧಿವೇಶನದಲ್ಲಿ ಸಮಸ್ಯೆ ಕುರಿತುಕೂಲಂಕಷ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಬೇಕು. ಕೃಷಿ ಭೂಮಿ ಹಕ್ಕಿಗಾಗಿ ಸಾಕಷ್ಟು ಬಾರಿ ಮನವಿಸಲ್ಲಿಸಿದರೂ ಸರ್ಕಾರ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿದೆ. ಅರಣ್ಯ ಇಲಾಖೆಯೂ ಆ ಪ್ರದೇಶದಲ್ಲಿಕೃಷಿ ಚಟುವಟಿಕೆಗೆ ಅಡ್ಡಿ ಮಾಡುತ್ತಿರುವುದರಿಂದ ಸದ್ಯ ಜೀತವಿಮುಕ್ತರು ಅಕ್ಷರಶಃ ಬೀದಿಗೆ ಬಿದ್ದಿದ್ದು,ಮರಳಿ ಜೀತಗಾರರಾಗುವ ದುರಂತದ ಸ್ಥಿತಿ ಎದುರಾಗಿದೆ’ಎಂದು ಹೇಳಿದ್ದಾರೆ.
‘ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 101 ಕುಟುಂಬಗಳಿಗೆ ತಲಾ 4 ಎಕರೆ ಕೃಷಿ ಭೂಮಿಯನ್ನು, ಅವರು
ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಗೊಬ್ಬಳಿ ಅರಣ್ಯ ಪ್ರದೇಶದಲ್ಲೇ ಮಂಜೂರು ಮಾಡಬೇಕು. ಇದಾಗದಿದ್ದ ಪಕ್ಷದಲ್ಲಿ ಅವರಿಗೆ ಅರಕಲಗೂಡು ತಾಲ್ಲೂಕಿನ ಇತರೆಡೆ ಪರ್ಯಾಯ ಕೃಷಿ ಭೂಮಿನೀಡಬೇಕು. ಕೃಷಿ ಭೂಮಿ ಇವರ ಹೆಸರಿಗೆ ಮಂಜೂರು ಆಗುವವರೆಗೆ ಸಾಗುವಳಿ ಮಾಡುತ್ತಿದ್ದ ಗೊಬ್ಬಳಿಅರಣ್ಯ ಪ್ರದೇಶದಲ್ಲಿಯೇ ಸದ್ಯಕ್ಕೆ ಕೃಷಿ ಚಟುಚಟಿಕೆ ನಡೆಸಿಕೊಂಡು ಬದುಕಲು ಅವಕಾಶ ನೀಡಬೇಕು’ಎಂದು ಆಗ್ರಹಿಸಿದ್ದಾರೆ.
‘ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ಪ್ರತಿ ತಿಂಗಳು ತಲಾ ₹6 ಸಾವಿರ ಪರಿಹಾರ ಧನ ಮತ್ತುಉಚಿತ ಪಡಿತರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡಬೇಕು’ ಎಂದುಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.