ADVERTISEMENT

ಪಿಎಸ್‌ಐ ಹಗರಣ–ಭವಿಷ್ಯದ ನಾಯಕರೊಬ್ಬರ ಕೈವಾಡ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 15:47 IST
Last Updated 6 ಮೇ 2022, 15:47 IST

ಚನ್ನರಾಯಪಟ್ಟಣ: ‘ಪಿಎಸ್‍ಐ ನೇಮಕಾತಿ ಅಕ್ರಮದ ಮೂಲ ಹುಡುಕಿಕೊಂಡು ಹೋದರೆ ಸರ್ಕಾರವೇ ಉಳಿಯುವುದಿಲ್ಲ. ಏಕೆಂದರೆ ಅದರ ಹಿಂದೆ ರಾಜ್ಯದ ಭವಿಷ್ಯದ ನಾಯಕರಾಗುವ ವ್ಯಕ್ತಿಯೊಬ್ಬರಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಪ್ರಶ್ನೆಪತ್ರಿಕೆ ಸೋರಿಕೆಗೆಸಂಬಂಧಿಸಿದಂತೆ ಈವರೆಗೆ ಇಬ್ಬರನ್ನು ಬಂಧಿಸಲಾಗಿದೆ. ಇದು ಪಿಎಸ್‍ಐ ಹಗರಣಕ್ಕಿಂತ ದೊಡ್ಡದು’ ಎಂದರು.

'ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿಯಪಿಂಚಣಿಗೆ ಮೀಸಲಿಟ್ಟಿದ್ದ ₹1,350 ಕೋಟಿಯನ್ನು ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಬೆಂಗಳೂರಿನ ಎರಡು ವಿಶ್ವವಿದ್ಯಾಲಯ, ತುಮಕೂರು, ಮಂಡ್ಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿಯೂ ಶೇ 40ಕ್ಕಿಂತ ಹೆಚ್ಚು ಕಮಿಷನ್ ದಂಧೆ ನಡೆಯುತ್ತಿದೆ. ಶಿಕ್ಷಣ ಇಲಾಖೆಯ ಕಮಿಷನರ್ ಆಗಿರುವ ಮಹಾರಾಷ್ಟ್ರ ಮೂಲದ ಐಎಎಸ್ ಅಧಿಕಾರಿಯೊಬ್ಬರು ಬೆಂಗಳೂರಿನ ಅತಿಥಿ ಗೃಹದಲ್ಲಿ ಕುಳಿತು ಅವ್ಯವಹಾರ ನಡೆಸಿದ್ದಾರೆ’ ಎಂದು ದೂರಿದರು.

ADVERTISEMENT

‘ಆರ್‌ಎಸ್‍ಎಸ್, ಎಬಿವಿಪಿಗೆ ಸೇರಿದವರನ್ನು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸುವ ಮೂಲಕ ಅಕ್ರಮ ಎಸಗಲಾಗುತ್ತಿದೆ. ಮುಖ್ಯಮಂತ್ರಿ ಆರ್‌ಎಸ್‍ಎಸ್ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ. ವಿಶ್ವವಿದ್ಯಾಲಯಗಳು ಆರ್‌ಎಸ್‍ಎಸ್‌ಮಯವಾಗುತ್ತಿವೆ. ಶಿಕ್ಷಣ ವ್ಯವಸ್ಥೆ ಹಾಳು ಮಾಡಬೇಡಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.