ಅರಕಲಗೂಡು: ‘ಶಿಕ್ಷಣ ಇಲಾಖೆಯು ಇತರೆ ಎಲ್ಲಾ ಇಲಾಖೆಗಳಿಗೂ ಮಾದರಿಯಾಗುವಂತಿದ್ದು, ಇಲಾಖೆ ಆಯೋಜಿಸುವ ಕಾರ್ಯಕ್ರಮ ಸುವ್ಯವಸ್ಥಿತವಾಗಿದ್ದು, ಪೋಷಕರು ಮತ್ತು ಮಕ್ಕಳನ್ನು ಸೆಳೆಯುವಂತಿರಬೇಕು’ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ರಾಮನಾಥಪುರ ಹೋಬಳಿಯ ಬಸವಾಪಟ್ಟಣದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಆಂಗ್ಲ ಮಾಧ್ಯಮದ ಎಲ್ಕೆಜಿ, 1ನೇ ತರಗತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಭಾಗದ ಶಾಲೆಗಳಿಗೆ ಬಡವರು, ಕೂಲಿ ಕಾರ್ಮಿಕರ ಮಕ್ಕಳೇ ದಾಖಲಾಗುತ್ತಾರೆ. ಇವರಿಗೂ ಸಹ ಆಂಗ್ಲ ಮಾಧ್ಯಮದ ಶಿಕ್ಷಣ ದೊರಕಿಸಿಕೊಡಲು ಸರ್ಕಾರ ಮುಂದಾಗಿದೆ’ ಎಂದರು.
‘ಬಸವಾಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಈಗಾಗಲೇ ಶಾಲಾ ನಿರ್ವಹಣಾ ವೆಚ್ಚಕ್ಕೆ ₹ 5 ಲಕ್ಷ, ದುರಸ್ತಿ ವೆಚ್ಚಕ್ಕೆ ₹ 22 ಲಕ್ಷ ಸೇರಿದಂತೆ ಒಟ್ಟು ₹ 27 ಲಕ್ಷ ಹಣವನ್ನು ಮುಖ್ಯ ಶಿಕ್ಷಕರ ಖಾತೆಗೆ ಜಮಾ ಮಾಡಲಾಗಿದೆ’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಸ್.ಆರ್.ನಾಗರಾಜ್, ಸದಸ್ಯೆ ಮಮತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ, ಡಿಡಿಪಿಐ ಮಂಜುನಾಥ್, ಡಯಟ್ ಉಪ ನಿರ್ದೇಶಕ ಪುಟ್ಟರಾಜು, ಬಿಇಒ ಶಿವನಂಜೇಗೌಡ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜೇಗೌಡ, ಸಿಡಿಸಿ ಉಪಾಧ್ಯಕ್ಷ ಟಿ.ಟಿ.ಮಹೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.