
ಹೊಳೆನರಸೀಪುರ: ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ಸೋಂಕಿಗೆ ಯಾವುದೇ ಔಷಧವಿಲ್ಲ. ಜೊತೆಗೆ ಮಾರಣಾಂತಿಕವಾಗಿದೆ. ನಾಯಿ ಕಡಿದರೂ ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮವಾಗಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲು ಪ್ರಾಮುಖ್ಯತೆ ನೀಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ವೈದ್ಯೆ ಡಾ.ನಿಧಾ ತಿಳಿಸಿದರು.
ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಸಮೀಪ ಮಂಗಳವಾರ ಪುರಸಭೆ, ಕೇರ್ ಆಫ್ ವಾಯ್ಸ್ಲೆಸ್ ಅನಿಮಲ್ಸ್ ಟ್ರಸ್ಟ್ ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಸಹಯೋಗದಲ್ಲಿ ರೇಬಿಸ್ ನಿರ್ಮೂಲನಾ ಯೋಜನೆಯಡಿ ಬೀದಿ ನಾಯಿಗಳಿಗೆ ಉಚಿತ ಲಸಿಕೆ, ಹುಚ್ಚು ನಾಯಿಗಳಿಗೆ ರೋಗದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಶು ಆಸ್ಪತ್ರೆಯಲ್ಲಿ ಸಾಕು ಪ್ರಾಣಿಗಳಿಗೆ ಈ ಚುಚ್ಚುಮದ್ದು ನೀಡಲಾಗುತ್ತಿದ್ದು, ನಾಗರಿಕರು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.
ಪುರಸಭೆಯ ಪರಿಸರ ಎಂಜಿನಿಯರ್ ರುಚಿದರ್ಶಿನಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ 5 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ವಾರಕ್ಕೆ ಒಮ್ಮೆ 120 ರಿಂದ 150 ನಾಯಿಗಳಿಗೆ ಚುಚ್ಚುಮದ್ದು ನೀಡಲಾಗುತ್ತದೆ. 6 ತಿಂಗಳಿಗೆ ಒಮ್ಮೆ ಚುಚ್ಚುಮದ್ದು ನೀಡಬೇಕಿದ್ದು, ಲಸಿಕೆ ನೀಡುವ ಯೋಜನೆ ನಿರಂತರವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ವ್ಯವಸ್ಥಾಪಕಿ ಪಂಕಜಾ, ಅಧಿಕಾರಿ ರಮೇಶ್, ಅರೋಗ್ಯಾಧಿಕಾರಿ ವಸಂತ್, ಮೇಸ್ತ್ರಿ ಚಲುವ, ಮಾದಯ್ಯ, ನಾಗಮ್ಮ, ಕಿರಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.