ADVERTISEMENT

ಮಳೆಯಿಂದಾಗಿ ಭತ್ತ ನೀರುಪಾಲು: ರೈತರು ಕಂಗಾಲು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 16:50 IST
Last Updated 12 ಡಿಸೆಂಬರ್ 2020, 16:50 IST
ಆಲೂರು ಕಸಬಾ ಹಂತನಮನೆ ಬಳಿ ಕೊಯ್ಲು ಮಾಡಿದ ಭತ್ತ ಮಳೆಯಾದ ಕಾರಣ ತೊಯ್ದಿರುವುದು
ಆಲೂರು ಕಸಬಾ ಹಂತನಮನೆ ಬಳಿ ಕೊಯ್ಲು ಮಾಡಿದ ಭತ್ತ ಮಳೆಯಾದ ಕಾರಣ ತೊಯ್ದಿರುವುದು   

ಆಲೂರು: ಎರಡು ದಿನದ ಹಿಂದೆ ಮಳೆಯಾದ ಕಾರಣ ಗದ್ದೆಯಲ್ಲಿ ಬೆಳೆ ಕೊಯ್ಲು ಮಾಡಲು ಮತ್ತು ಕೊಯ್ಲು ಮಾಡಿದವರು ತೊಂದರೆಗೀಡಾಗಿದ್ದು ಗದ್ದೆಗಳಲ್ಲಿ ಭತ್ತ ಉದುರುತ್ತಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 5000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಬೆಳೆ ಹುಲುಸಾಗಿದೆ. ಆದರೆ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಎರಡು ದಿನ ಸಂಜೆ ವೇಳೆ ಮಳೆಯಾಯಿತು. ಅಷ್ಟರಲ್ಲಿ ಕೆಲ ರೈತರು ಭತ್ತ ಕೊಯ್ಲು ಮಾಡಿದ್ದರು. ಮಳೆಯಾದ್ದರಿಂದ ಗದ್ದೆಯಲ್ಲಿ ಕೊಯ್ಲು ಮಾಡಿದ್ದ ಭತ್ತ ತೇವಗೊಂಡಿದೆ. ಒಂದು ವಾರ ಕಾಲ ಬಿಸಿಲು ವಾತಾವರಣವಿದ್ದರೆ ಮಾತ್ರ ಉದುರಿ ಉಳಿದ ಭತ್ತವನ್ನು ಕಾಪಾಡಿಕೊಳ್ಳಬಹುದು. ಇಲ್ಲವಾದರೆ ಕಷ್ಟವಾಗುತ್ತದೆ.

ತಾಂತ್ರಿಕ ಕೃಷಿ ಆಧರಿಸಿ ಭತ್ತ ಕಟಾವು ಮಾಡಿದ್ದರೂ, ಭತ್ತ ಒಣಗಿಸಲು ಹೆಣಗಾಡುತ್ತಿದ್ದಾರೆ. ಕೆಲ ರೈತರು ಮಳೆ ಬಿಡುವಿಲ್ಲದಿರುವುದರಿಂದ ಕಟಾವು ಮಾಡದೆ ಗದ್ದೆಯಲ್ಲೇ ಬಿಟ್ಟಿದ್ದಾರೆ.

ADVERTISEMENT

‘ಕೊಯ್ಲು ಮಾಡಿದ ಭತ್ತದ ತೆನೆಯನ್ನು ಮೆದೆಗೆ ಹಾಕಿ ಕನಿಷ್ಠ 15 ದಿನದ ನಂತರ ಒಕ್ಕಲು ಮಾಡಿದರೆ ಭತ್ತ ಊಟಕ್ಕೆ ಉಪಯೋಗಿಸಲು ಗುಣಾತ್ಮಕವಾಗಿರುತ್ತದೆ. ಇಲ್ಲದಿದ್ದರೆ ಗುಣಮಟ್ಟ ಕಳೆದುಕೊಂಡಿರುತ್ತದೆ’ ಎನ್ನುತ್ತಾರೆ ರೈತ ಕಿರೆಹಳ್ಳಿ ರಂಗೇಗೌಡರು.

‘ತಾಲ್ಲೂಕಿನಲ್ಲಿ ಭತ್ತ ಬೆಳೆ ಶೇ 75 ರಷ್ಟು ಕಟಾವು ಆಗಿದೆ. ಪಾಳ್ಯ, ಕಸಬಾ ಹೋಬಳಿಯಲ್ಲಿ ಹೆಚ್ಚು ಬೆಳೆಯಲಾಗಿದೆ. ಅಕಾಲಿಕ ಮಳೆಯಾಗಿರುವುದರಿಂದ ತೊಂದರೆಗೆ ಸಿಲುಕಿರುವ ಗದ್ದೆ ಪ್ರಮಾಣವನ್ನು ಸರ್ಕಾರಕ್ಕೆ ವರದಿ ಮಾಡಲಾಗುವುದು. ಆಗಿರುವ ನಷ್ಟಕ್ಕೆ ಪರಿಹಾರ ಕೊಡುವ ಅವಕಾಶವಿದ್ದರೆ ಕ್ರಮ ಜರುಗಿಸಲಾಗುವುದು. ತೊಂದರೆಗೆ ಸಿಲುಕಿರುವ ರೈತರು ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಬೇಕು. ಕಂದಾಯ ಇಲಾಖೆಯೊಂದಿಗೆ ಜಂಟಿ ಪರಿಶೀಲನೆ ಮಾಡಿ ವರದಿ ನೀಡಲಾಗುವುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಮ್ಮಣ್ಣಗೌಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.