ADVERTISEMENT

ರಾಮೇಶ್ವರ ದೇಗುಲ ರಾಜಗೋಪುರದ ಕೆಲಭಾಗ ಕುಸಿತ

ಹಾಸನ–ಕೊಡಗಿನಲ್ಲಿ ತಗ್ಗಿದ ಮಳೆ ಅಬ್ಬರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 2:54 IST
Last Updated 26 ಜುಲೈ 2021, 2:54 IST
ರಾಮನಾಥಪುರದ ರಾಮೇಶ್ವರಸ್ವಾಮಿ ದೇವಾಲಯದ ರಾಜಗೋಪುರದ ಕೆಲಭಾಗ ಬಿದ್ದಿರುವುದು
ರಾಮನಾಥಪುರದ ರಾಮೇಶ್ವರಸ್ವಾಮಿ ದೇವಾಲಯದ ರಾಜಗೋಪುರದ ಕೆಲಭಾಗ ಬಿದ್ದಿರುವುದು   

ಕೊಣನೂರು (ಹಾಸನ): ರಾಮನಾಥಪುರದಲ್ಲಿರುವ ಪುರಾತನ ರಾಮೇಶ್ವರಸ್ವಾಮಿ ದೇವಾಲಯದ ರಾಜಗೋಪುರದಲ್ಲಿನ ಕೆಲಭಾಗ ಮಳೆಯಿಂದಾಗಿ ಭಾನುವಾರ ಕುಸಿದಿದೆ.

‘ಚತುರ್ಯುಗಮೂರ್ತಿ‍’ ಎಂದೇ ಪ್ರಸಿದ್ಧವಾಗಿರುವ ದೇವಾಲಯವನ್ನು ಕಾವೇರಿ ನದಿ ದಂಡೆಯಲ್ಲಿ ಸುಮಾರು 600 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ. ಈ ರಾಜಗೋಪುರದ ಮೇಲಿನ ವಿಗ್ರಹದ ತಲೆಯ ಭಾಗ ಮುರಿದು ಬಿದ್ದಿದೆ.

ದೇವಾಲಯದ ಕೆಲ ಭಾಗಗಳು ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ವಿಶಿಷ್ಟ ವಾಸ್ತುಶಿಲ್ಪದ ದೇವಾಲಯವನ್ನು ಜೀರ್ಣೋದ್ಧಾರ ಮಾಡಬೇಕೆಂಬ ಮಾತು ಹಲವು ದಿನಗಳಿಂದ ಕೇಳಿ ಬರುತ್ತಿತ್ತು.

ADVERTISEMENT

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಎ.ಟಿ.ರಾಮಸ್ವಾಮಿ, ‘ದೇವಾಲಯವು ಶಿಥಿಲವಾಗುತ್ತಿರುವುದನ್ನು ಮನಗಂಡು ಜೀರ್ಣೋದ್ಧಾರಕ್ಕಾಗಿ ಈ ಮೊದಲೇ ಪ್ರಾಚ್ಯವಸ್ತು ಇಲಾಖೆಯ ಅನುಮತಿ ಪಡೆದು ₹ 4 ಕೋಟಿ ಮಂಜೂರು ಮಾಡಿಸಿದ್ದೆ. ಕೋವಿಡ್‌ ಹಿನ್ನೆಲೆಯಲ್ಲಿ ಕಾಮಗಾರಿ ತಡವಾಗಿದೆ’ ಎಂದರು.

ತಗ್ಗಿದ ಮಳೆಯ ಅಬ್ಬರ: ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಅಬ್ಬರಿಸಿದ್ದ ಮಳೆ ಭಾನುವಾರ ತಗ್ಗಿತ್ತು. ಕೆಲವೆಡೆ ಸಾಧಾರಣ ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಯಲ್ಲೂ ನೀರಿನಮಟ್ಟ ಇಳಿಕೆಯಾಗಿದೆ. ಶನಿವಾರ ಸಂಜೆಯಿಂದಲೇ ಕಾನೂರು – ಹರಿಹರ ಮಾರ್ಗದ ಸೇತುವೆ ಮೇಲೆ ವಾಹನ ಸಂಚಾರ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.