ಕೊಣನೂರು: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಕೃಷಿ ಅನುಸಂಧಾನ ಪರಿಷತ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕಂದಲಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ರಾಮನಾಥಪುರ ಹೋಬಳಿಯ ಸುತ್ತಲಿನ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟಿಸಿದ ಪ್ರಗತಿಪರ ರೈತ ರವೀಂದ್ರ, ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕೈಗೊಂಡಿರುವುದು ರೈತರಿಗೆ ತುಂಬಾ ಉಪಯೋಗವಾಗಿದೆ ಎಂದು ತಿಳಿಸಿದರು. ಕೃಷಿ ಅಧಿಕಾರಿ ಜ್ಞಾನಮೂರ್ತಿ ಮಾತನಾಡಿ, ಕೃಷಿ ಭಾಗ್ಯ ಯೋಜನೆ, ಸಬ್ಸಿಡಿ ದರದಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡುವುದು ಮತ್ತು ಇತರೆ ಯೋಜನೆಗಳ ಬಗ್ಗೆ ಮಾಹಿತಿ ಕೊಟ್ಟರು.
ಆಕಾಶವಾಣಿ ಕೃಷಿ ರಂಗ ಕಾರ್ಯಕ್ರಮದ ನಿರ್ದೇಶಕ ಮಧುಸೂದನ್ ಮಾತನಾಡಿ, ಅತಿ ಹೆಚ್ಚು ತಂಬಾಕು ಬೆಳೆಯುವ ಪ್ರದೇಶದಲ್ಲಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಎರಡನೇ ಬೆಳೆಯಾಗಿ ರಾಗಿ ಬೆಳೆಯಬಹುದು ಎಂದು ತಿಳಿಸಿದರು.
ಕೇಂದ್ರದ ವಿಜ್ಞಾನಿ ಡಾ. ಪಲ್ಲವಿ ಎನ್., ಮಾತನಾಡಿ, ತರಕಾರಿ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಾಮುಖ್ಯತೆ ತಿಳಿಸುವುದರ ಜೊತೆಗೆ ಮಣ್ಣಿನ ಫಲವತ್ತತೆಯ ಹೆಚ್ಚಿಸುವ ತಾಂತ್ರಿಕತೆಗಳ ಬಗ್ಗೆ ಮಾಹಿತಿ ಕೊಟ್ಟರು. ವಿಜ್ಞಾನಿ ಡಾ.ನಾಗರಾಜ ಟಿ., ಅಡಿಕೆ ಮತ್ತ ತೆಂಗಿನಲ್ಲಿ ಸುಳಿ ಕೊಳೆ ರೋಗದ ಬಗ್ಗೆ ಹಾಗೂ ಮುಸುಕಿನ ಜೋಳದಲ್ಲಿ ಕೇದಿಗೆ ರೋಗ ಹಾಗೂ ಸೈನಿಕ ಹುಳುವಿನ ನಿಯಂತ್ರಣದ ಬಗ್ಗೆ ಮಾಹಿತಿ ಕೊಟ್ಟರು. ವಿಜ್ಞಾನಿ ಡಾ.ಶ್ರೀನಿವಾಸ ದೇಶಪಾಂಡೆ, ಭತ್ತದಲ್ಲಿ ಯಾಂತ್ರೀಕರಣ ಮತ್ತು ಡ್ರೋನ್ ಮೂಲಕ ಲಘು ಪೋಷಕಾಂಶಗಳ ಸಿಂಪರಣೆ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಪಶುರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಸತೀಶ್ಗೌಡ ಮಾತನಾಡಿ, ಜಾನುವಾರುಗಳಲ್ಲಿ ಕಂಡು ಬರುವ ರೋಗಗಳನ್ನು ನಿಯಂತ್ರಿಸುವ ಕ್ರಮ ಹಾಗೂ ಕಾಲ ಕಾಲಕ್ಕೆ ಲಸಿಕೆ ಹಾಕಿಸಿ ಜಾನುವಾರುಗಳನ್ನು ರಕ್ಷಿಸಿ ಎಂದು ತಿಳಿಸಿದರು.
ರಾಷ್ಟ್ರೀಯ ಪಶುಪೋಷಣೆ ಮತ್ತು ಶರೀರಶಾಸ್ತ್ರ ಸಂಸ್ಥೆ ವಿಜ್ಞಾನಿ ಡಾ. ಡೇವಿಡ್, ಜಾನುವಾರುಗಳಿಗೆ ಸಮತೋಲನ ಆಹಾರ, ಪೋಷಕಾಂಶಗಳು ಮತ್ತು ವಿವಿಧ ಮೇವಿನ ಬೆಳೆಗಳ ಬಗ್ಗೆ ತಿಳಿಸಿದರು. ಬೆಂಗಳೂರಿನ ಕೇಂದ್ರಿಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಸೋನಾಲಿಕಾ ಸಾಹೂ, ಮಣ್ಣಿನಲ್ಲಿರುವ ಪೋಷಕಾಂಶಗಳು ಹಾಗೂ ಮಣ್ಣು ಮಾದರಿಯ ಸಂಗ್ರಹಣೆಯ ಬಗ್ಗೆ ತಿಳಿಸಿದರು.
ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಿವಶಂಕರ್, ಗ್ರಾಮ ಪಂಚಾಯಿತಿಯ ಸದಸ್ಯರು, ರೈತ ಮುಖಂಡರು, ಕೃಷಿ ಸಖಿಯರು ಹಾಗೂ ರಾಮನಾಥಪುರ ಹೋಬಳಿಯ ಸುತ್ತಲಿನ ಗ್ರಾಮಗಳ 716 ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.