ADVERTISEMENT

ಕೋಳಿ ಅಂಗಡಿ ತೆರವುಗೊಳಿಸಿ: ಶಾಸಕ

ಪುರಸಭೆ ಅಧಿಕಾರಿಗಳಿಗೆ ಶಾಸಕ ಕೆ.ಎಸ್‌.ಲಿಂಗೇ‌ಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 1:58 IST
Last Updated 12 ಸೆಪ್ಟೆಂಬರ್ 2020, 1:58 IST
ಸಮಾಜಕಲ್ಯಾಣ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯ ದೃಶ್ಯ
ಸಮಾಜಕಲ್ಯಾಣ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯ ದೃಶ್ಯ   

ಬೇಲೂರು: ಡಾ. ಬಿ.ಆರ್. ಅಂಬೇಡ್ಕರ್‌ ಭವನದ ಸಮೀಪವಿರುವ ಕೋಳಿ ಅಂಗಡಿಗಳ ತೆರವಿಗೆ ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಸೂಚಿಸಿದರು.

ಪಟ್ಟಣದ ಸಮಾಜಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಬಿಕ್ಕೋಡಿನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ವಸತಿ ಶಾಲೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಮಲೆನಾಡು ಅಭಿವೃದ್ಧಿ ನಿಗಮದಿಂದ ₹ 10 ಕೋಟಿ ಅನುದಾನ ಪಡೆಯಲಾಗುತ್ತಿದೆ. ವಾಲ್ಮೀಕಿ ಸಮುದಾಯ ಭವನಕ್ಕೆ ಸ್ಥಳ ಗುರುತಿಸಲಾಗುವುದು. ಅಡಗೂರು ಸುತ್ತಲಿನ ಗ್ರಾಮಗಳಲ್ಲಿ ಮಹಾನಾಯಕ ಫ್ಲೆಕ್ಸ್‌ ತೆರವುಗೊಳಿಸಿರುವುದು ಸರಿಯಲ್ಲ. ಹಳೇಬೀಡು ಎಎಸ್‍ಐ ಹಾಗೂ ಅಡಗೂರು ಗ್ರಾ.ಪಂ. ಕಾರ್ಯದರ್ಶಿಗೆ ನೊಟೀಸ್ ನೀಡಿ ಎಂದರು.

ADVERTISEMENT

ಬಿಎಸ್‍ಪಿ ರಾಜ್ಯ ಘಟಕದ ಕಾರ್ಯದರ್ಶಿ ಗಂಗಾಧರ್ ಬಹು ಜನ್ ಮಾತನಾಡಿ, ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಉಪ ಪ್ರಾಂಶುಪಾಲರು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸು ವಾಗ, ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಶುಲ್ಕ ಪಾವತಿಸುವಾಗ ವಿದ್ಯಾರ್ಥಿಗಳಿಂದ ಹೆಚ್ಚು ಹಣ ವಸೂಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಬಿ.ಎಲ್.ಲಕ್ಷ್ಮಣ್ ಮಾತನಾಡಿ, ಸರ್ಕಾರದಿಂದ ಆರ್ಥಿಕ ನೆರವು ಇಲ್ಲದ ಕಾರಣ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಉಪಪ್ರಾಂಶುಪಾಲರು ತಿಳಿಸಿ ದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡ ಈಶ್ವರ್ ಪ್ರಸಾದ್, ತಾಲ್ಲೂಕಿನ ಕೆಲವು ಚಿಲ್ಲರೆ ದಿನಸಿ ಅಂಗಡಿ, ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ ಎಂದರು.

ತಾ.ಪಂ.ಅಧ್ಯಕ್ಷೆ ಇಂದಿರಾ ರವಿಕುಮಾರ್, ಉಪಾಧ್ಯಕ್ಷೆ ಜಮುನಾ ಅಣ್ಣಪ್ಪ, ಸದಸ್ಯರಾದ ಮಂಜುನಾಥ್, ಸೋಮಯ್ಯ, ಕಮಲಮ್ಮ, ಸವಿತಾ, ಸಂಗೀತಾ, ತಹಶೀಲ್ದಾರ್ ನಟೇಶ್, ತಾ.ಪಂ ಇಒ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಮೋಹನ್‍ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.