ಹೊಳೆನರಸೀಪುರ: ಪಟ್ಟಣದ ಹಾಸನ–ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ರಸ್ತೆ ಕಾಮಗಾರಿಗೆ ಹಾಕಿದ್ದ ಮಣ್ಣಿನ ರಾಶಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗುಂಡಿಗೆ ಬಿದ್ದು ಬೈಕ್ನ ಹಿಂಬದಿ ಸವಾರ ಮೃತಪಟ್ಟು, ಸವಾರರೊಬ್ಬರು ಗಾಯಗೊಂಡಿದ್ದಾರೆ.
ತಾಲೂಕಿನ ಕೃಷ್ಣಾಪುರ ಗ್ರಾಮದ ನಿವಾಸಿ, ಪಟ್ಟಣದ ಮಣಪುರಂ ಹಣಕಾಸು ಸಂಸ್ಥೆಯ ಉದ್ಯೋಗಿ ಕೆ.ಜೆ. ಧನುಜ್ (25) ಮೃತಪಟ್ಟವರು. ಬೈಕ್ ಸವಾರ ಸುಮಂತ್ ಗಾಯಗೊಂಡಿದ್ದಾರೆ.
ಹೆದ್ದಾರಿ ಕಾಮಗಾರಿ ಅಭಿವೃದ್ಧಿಗೆ ಅಗೆದ ಗುಂಡಿಯ ಮಣ್ಣನ್ನು ರಸ್ತೆಗೆ ಅಡ್ಡವಾಗಿ ಸುರಿಯಲಾಗಿತ್ತು. ಇಬ್ಬರೂ ಬೈಕ್ನಲ್ಲಿ ಲಕ್ಕೂರಿಗೆ ಹೋಗಿ ವಾಪಸ್ ಬರುತ್ತಿದ್ದಾಗ ಮಣ್ಣಿನ ರಾಶಿ ಕಾಣದೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿ ಕುಳಿತಿದ್ದ ಧನುಜ್ ರಸ್ತೆಯ ಗುಂಡಿಗೆ ಬಿದ್ದಿದ್ದು, ಗುಂಡಿಯ ಕಾಮಗಾರಿಗೆ ಹಾಕಿದ್ದ ಕಬ್ಬಿಣದ ರಾಡ್ಗಳು ಚುಚ್ಚಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಮಂತ್ ಗಂಭೀರವಾಗಿ ಗಾಯಗೊಂಡಿದ್ದು, ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ಗಳು ಹಾಗೂ ಗುತ್ತಿಗೆದಾರನ ಬೇಜಾಬ್ದಾರಿಯೇ ಕಾರಣ’ ಎಂದು ಮೃತನ ಸಂಬಂಧಿಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಬ್ಯಾರಿಕೇಡ್ ಹಾಕದೇ ಗುಂಡಿ ಕಾಣುವಂತಹ ವಿದ್ಯುತ್ ದೀಪ ಅಳವಡಿಸದ ಕಾರಣ ಅಪಘಾತವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಪ್ರದೀಪ್ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.