ಸಕಲೇಶಪುರ: ಪಶ್ಚಿಮಘಟ್ಟದ ಹಸಿರು, ಬೆಟ್ಟಗುಡ್ಡ, ಹಳ್ಳ, ಝರಿ ಜಲಪಾತಗಳ ನೈಸರ್ಗಿಕ ಸೌಂದರ್ಯ ಮುಡಿಗೇರಿಸಿಕೊಂಡಿರುವ ಸಕಲೇಶಪುರ ಪ್ರವಾಸಿಗರ ಸ್ವರ್ಗ ಎಂದು ಚಲನಚಿತ್ರ ನಟ ಶ್ರೀನಗರ ಕಿಟ್ಟಿ ಹೇಳಿದರು.
ತಾಲ್ಲೂಕಿನ ಅಗನಿ ಗ್ರಾಮದ ತಪೋವನ ರೆಸಾರ್ಟ್ ಅನ್ನು ‘ದಿ ಗ್ರೇಟ್ ಇಂಡಿಯನ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ತ್ರಿಷ್ವಮ್’ ಗೆ ಸೇರ್ಪಡೆ ಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ನೂರಾರು ಚಲನ ಚಿತ್ರಗಳು ಇಲ್ಲಿಯ ನಿಸರ್ಗದಲ್ಲಿ ಚಿತ್ರೀಕರಣಗೊಂಡಿವೆ. ಡಾ. ರಾಜ್ಕುಮಾರ್ ಅವರು ಸಕಲೇಶಪುರವನ್ನು ಹೆಚ್ಚು ಇಷ್ಟಪಡುತ್ತಿದ್ದರು ಎಂದರು.
ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಂಡರೆ ಸ್ಥಳೀಯರಿಗೆ ಹೆಚ್ಚು ಉದ್ಯೋಗ ಸಿಗುತ್ತದೆ. ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ಪರಿಸರವನ್ನು ಸಂರಕ್ಷಣೆ ಮಾಡಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವುದು ಅಗತ್ಯ ಎಂದರು.
ತ್ರಿಷ್ವಮ್ ತಪೋವನ ರೆಸಾರ್ಟ್ ಪ್ರಧಾನ ವ್ಯವಸ್ಥಾಪಕ ಎಸ್.ಜಿ. ಚಂದನ್ ಮಾತನಾಡಿ, ಪ್ರಕೃತಿ ಸಂರಕ್ಷಣೆ ಮಾಡಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದು, ಜಾಗತಿಕ ಮಟ್ಟದಲ್ಲಿ ಸ್ಥಳೀಯ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವುದು, ಸಿಎಸ್ಆರ್ ನಿಧಿಯಿಂದ ಗ್ರಾಮೀಣ ಅಭಿವೃದ್ಧಿ, ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ ‘ತ್ರಿಷ್ವಮ್’ ಮುಖ್ಯ ಉದ್ದೇಶ ಎಂದರು. ಡಿವೈಎಸ್ಪಿ ಪ್ರಮೋದ್ ಕುಮಾರ್, ತ್ರಿಷ್ವಮ್ ಸಿಇಒ ಅಮಿತಾವ ರಾಯ್, ಬಿಜೆಪಿ ಮುಖಂಡ ಲೋಹಿತ್ ಜಂಬರಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.