
ಸಕಲೇಶಪುರ: ಸಹಸ್ರಾರು ಮಂದಿ ಭಕ್ತರ ಸಂಭ್ರಮ, ಸಡಗರದ ಮಧ್ಯೆ ಇಲ್ಲಿನ ಸಕಲೇಶ್ವರಸ್ವಾಮಿ ಪುಷ್ಪಾಲಂಕೃತ ಬ್ರಹ್ಮ ರಥೋತ್ಸವ (ದೊಡ್ಡತೇರು) ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಪ್ರತಿ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೂಕು ನುಗ್ಗಲಿನಲ್ಲಿ ಬಂದು ಪೂಜೆ ಮಾಡಿಸಿದರು. ರಥ ಮೆರವಣಿಗೆಯ ರಾಜಬೀದಿಯ ಹೇಮಾವತಿ ಸೇತುವೆಯಿಂದ ಟೌನ್ಹಾಲ್ವರೆಗೂ ಜನಸಾಗರ ಕಂಡುಬಂತು.
ನಂದಿ ಧ್ವಜ, ಡೊಳ್ಳುಕುಣಿತ, ಚೆಂಡೆ, ಮಲೆನಾಡಿನ ಕರಡಿ ವಾದ್ಯ, ಡಿಜೆಗೆ ಯುವಕರು ಹಾಗೂ ಯುವತಿಯರು ದಣಿವಾಗುವವರೆಗೂ ಕುಣಿದರು.
ಶನಿವಾರ ರಾತ್ರಿ ಗಿರಿಜಾ ಕಲ್ಯಾಣ, ನಂದಿ ವಾಹನೋತ್ಸವ ನಡೆದವು. ಭಾನುವಾರ ಗಳಿಗೆ ತೇರನ್ನು ದೇವಸ್ಥಾನ ಬೀದಿಯ ತಿರುವಿನವರೆಗೂ ಎಳೆದು ನಿಲ್ಲಿಸಲಾಗಿತ್ತು. ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಪುಷ್ಪಾಲಂಕೃತ ರಥೋತ್ಸವ ಆರಂಭವಾಯಿತು. ದೇವಸ್ಥಾನ ಬೀದಿಯಿಂದ, ಬ್ರಾಹ್ಮಣರ ಬೀದಿ ಮಾರ್ಗವಾಗಿ ಮಧ್ಯಾಹ್ನ 1.15ರ ಸುಮಾರಿಗೆ ರಾಜಬೀದಿ ಪ್ರವೇಶ ಮಾಡಿತು. ಅಲ್ಲಿಂದ ಮಧ್ಯಾಹ್ನ 3.30ರ ಸುಮಾರಿಗೆ ಟೌನ್ಹಾಲ್ ಮುಂಭಾಗಕ್ಕೆ ರಥವನ್ನು ಎಳೆಯಲಾಯಿತು.
ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಸಕಲೇಶ್ವರಸ್ವಾಮಿ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ನಡೆಯಿತು. ಹಿಂದೂ ಮಹಾಸಭಾ, ರಘುಜಿ ಹಿಂದೂ ಹಿತರಕ್ಷಣಾ ವೇದಿಕೆ, ತಾಲ್ಲೂಕು ಛಾಯಾಗ್ರಾಹಕರ ಸಂಘ, ಟೀಮ್ 46 ಯುವಕರ ತಂಡ, ಬೀದಿ ಬದಿ ವ್ಯಾಪಾರಿಗಳ ಸಂಘ, ಆಕಾಶ್ ಕರುಣಾಕರ್, ಎಂಜಿನಿಯರ್ ಶಶಾಂಕ್, ಮೊಬೈಲ್ ಕ್ಯಾಂಟೀನ್ ಸಂಘ, ಮುಸ್ಲಿಂ ಯುವಕರ ತಂಡ, ಅಶೋಕ ರಸ್ತೆ ಯುವಕರ ಸಂಘಗಳ ವತಿಯಿಂದ ಲಘು ಉಪಾಹಾರ ಹಾಗೂ ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು. ತಾರಾ ರೆಡಿಯೋ ಹೌಸ್ ರಾಘು, ಶೇಖು ಸ್ನೇಹಿತರ ತಂಡದಿಂದ ಸುಮಾರು 4ಸಾವಿರ ಕ್ಕೂ ಹೆಚ್ಚು ಭಕ್ತರಿಗೆ ಕಲ್ಲಂಗಡಿ ಹಣ್ಣು ವಿತರಣೆ ಮಾಡಿದರು. ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಲಡ್ಡು ವಿತರಿಸಿದರು.
ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಎಚ್.ಎಂ. ವಿಶ್ವನಾಥ್, ಉಪ ವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ಕೆ.ಎಸ್. ಸುಪ್ರಿತಾ, ಡಿವೈಎಸ್ಪಿ ಮಹಾಂತೇಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶ್ವಥ್ ವಳಲಹಳ್ಳಿ ಇದ್ದರು.
ಸಕಲೇಶ್ವರಸ್ವಾಮಿ ದೇವಸ್ಥಾನ ಸಮಿತಿಯ ಬ್ಯಾಕರವಳ್ಳಿ ಜಯಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಡಿ. ಆದರ್ಶ, ನಂದೀಕೃಪ ರಾಜು, ರವಿಕುಮಾರ್, ಎಸ್.ಎನ್. ಅವಿನಾಶ್ ಹಾಗೂ ಸಂಘದ ಸದಸ್ಯರು ರಥದ ಅಲಂಕಾರ ಹಾಗೂ ವ್ಯವಸ್ಥೆ ಮಾಡಿದ್ದರು.
ರಾಜಬೀದಿಯಲ್ಲಿ ರಥದ ಮೆರವಣಿಗೆ ಇದ್ದುದರಿಂದ ಈ ಮಾರ್ಗದ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಿದ್ದ ಪೊಲೀಸರು, ಅಶೋಕ ರಸ್ತೆ ಹಾಗೂ ಆಜಾದ್ ರಸ್ತೆಗಳನ್ನು ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದರು.
ರಥ ಎಳೆದ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಹಿಳೆಯರೊಂದಿಗೆ ಸೇರಿ ಸಕಲೇಶ್ವರಸ್ವಾಮಿ ರಥವನ್ನು ಎಳೆದರು. ‘ಎಲ್ಲ ರಥೋತ್ಸವದಲ್ಲಿ ಪುರುಷರು ಮಾತ್ರ ರಥವನ್ನು ಎಳೆಯುತ್ತಾರೆ. ಸಕಲೇಶ್ವರಸ್ವಾಮಿ ರಥವನ್ನು ಗಂಡು ಮತ್ತು ಹೆಣ್ಣು ಎಂಬ ವ್ಯತ್ಯಾಸ ಇಲ್ಲದೇ ಮಹಿಳೆಯರೂ ಕೂಡ ಎಳೆಯುವುದಕ್ಕೆ ಅವಕಾಶ ಇರುವುದು ಖುಷಿ ತಂದಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಹೇಮಾವತಿ ನದಿ ತೀರದ ಮಲೆನಾಡಿನ ಹೆಬ್ಬಾಗಿಲು ಸಕಲೇಶಪುರದ ರಾಜಬೀದಿಯಲ್ಲಿ ಸಕಲೇಶ್ವರಸ್ವಾಮಿ ರಥೋತ್ಸವದ ಮೆರವಣಿಗೆ ಹಾಗೂ ರಥೋತ್ಸವ ನೋಡಲು ಬರುವ ಭಕ್ತರ ಸಂಖ್ಯೆ ಗಮನ ಸೆಳೆಯಿತು. ರಥಕ್ಕೆ ಸುಂದರವಾಗಿ ಅಲಂಕಾರ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.