ADVERTISEMENT

ಸೀರೆ ವಿಚಾರಕ್ಕೆ ಮುರಿದು ಬಿದ್ದ ಮದುವೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 15:42 IST
Last Updated 6 ಫೆಬ್ರುವರಿ 2020, 15:42 IST

ಹಾಸನ: ಮದುವೆಯ ಧಾರೆ ಸೀರೆ ವಿಚಾರಕ್ಕೆ ಗಂಡು - ಹೆಣ್ಣಿನ ಮನೆಯವರ ನಡುವೆ ಶುರುವಾದ ಜಗಳ ಮದುವೆಯನ್ನೇ ಮುರಿದು ಹಾಕಿರುವ ಘಟನೆ ತಾಲ್ಲೂಕಿನ ಬಿದರಿಕೆರೆ ಗ್ರಾಮದಲ್ಲಿ ನಡೆದಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಫೆ.5 ರಂದು ಗ್ರಾಮದ ಬಿ.ಎನ್.ರಘುಕುಮಾರ್ ಮತ್ತು ಅದೇ ಗ್ರಾಮದ ಯುವತಿ ನಡುವೆ ವಿವಾಹವಾಗಿ, ಗುರುವಾರ ಬೀಗರ ಔತಣ ನಡೆಯಬೇಕಿತ್ತು. ಈಗ ಮಂಗಳ ಕಾರ್ಯ ನಿಂತು ಹೋಗಿದ್ದು, ಹುಡುಗ ನಾಪತ್ತೆಯಾಗಿದ್ದಾನೆ. ಶುಭಕಾರ್ಯಕ್ಕೆ ಬಂದಿದ್ದ ನೆಂಟರಿಷ್ಟರು ನಿರಾಶೆಯಿಂದ ಬಂದ ದಾರಿಕೆ ಸುಂಕವಿಲ್ಲ ಎಂಬಂತೆ ಮರಳಿದ್ದಾರೆ.

ಧಾರಾ ಮಹೂರ್ತಕ್ಕೆ ಹುಡುಗನ ಮನೆಯವರು ತಂದಿರುವ ಸೀರೆಯಲ್ಲಿ ಬಾರ್ಡರ್ ಇಲ್ಲ. ಇದನ್ನು ಬದಲಾಯಿಸಬೇಕೆಂಬ ಕಾರಣಕ್ಕೆ ವಧು-ವರರ ಮನೆಯವರ ನಡುವೆ ಜಗಳ ನಡೆದಿದೆ. ಪ್ರಕರಣ ಹಾಸನ ಮಹಿಳಾ ಠಾಣೆ ಮೆಟ್ಟಿಲೇರಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ಬೊಟ್ಟು ಮಾಡುತ್ತಿದ್ದಾರೆ. ಸಂಭ್ರಮ ಮೂಡಬೇಕಿದ್ದ ಊರಲ್ಲೀಗ ಮೌನ ಮನೆ ಮಾಡಿದೆ.

ADVERTISEMENT

‘ಹುಡುಗಿ ಬಟ್ಟೆ ಚೆನ್ನಾಗಿಲ್ಲ ಎಂದು ಹುಡುಗನ ಮನೆಗೆ ಹೋಗಿ ಹೇಳಿದಳು ಎನ್ನುವ ಕಾರಣಕ್ಕೆ ಹುಡುಗ ಮಹೂರ್ತಕ್ಕೇ ಬರಲಿಲ್ಲ. ಹುಡುಗ ಬಂದರೆ ಮದುವೆಯಾಗಲು ಹುಡುಗಿ ಸಿದ್ಧ. ಆದರೆ ಹುಡುಗನ ಕಡೆಯವರೇ ಹಿಂದೇಟು ಹಾಕುತ್ತಿದ್ದಾರೆ’ ಎಂದು ದಲಿತ ಮುಖಂಡ ನಾರಾಯಣದಾಸ್ ಆರೋಪಿಸಿದರು.

‘ಧಾರೆ ಸೀರೆ ಚೆನ್ನಾಗಿಲ್ಲ ಎನ್ನವುದು ಕೇವಲ ನೆಪ. ಹೆಚ್ಚಿನ ವರದಕ್ಷಿಣೆ ಕೊಡಲಿ ಎಂದು ಹುಡುಗನ ಮನೆಯವರು ತಗಾದೆ ತೆಗೆದಿದ್ದಾರೆ. ಇದರಿಂದ ನಮ್ಮ ಹುಡುಗಿಗೆ ಅನ್ಯಾಯವಾಗಿದೆ. ನೆಂಟರಿಷ್ಟರ ಎದುರು ಕುಟುಂಬದ ಮರ್ಯಾದೆ ಹಾಳಾಗಿದೆ’ ಎಂದು ಹುಡುಗಿ ಅಕ್ಕ ಅಳಲು ತೊಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.