ADVERTISEMENT

ಹಾಸನ | ಶರಣ ಸಾಹಿತ್ಯ ಪರಿಷತ್‌ ಜಾತಿಗೆ ಸೀಮಿತವಲ್ಲ: ವಿಜಯಕುಮಾರ ಸ್ವಾಮೀಜಿ

ಸುತ್ತೂರು ಶ್ರೀಗಳ 110 ನೇ ಜನ್ಮದಿನದಲ್ಲಿ ತಣ್ಣೀರುಹಳ್ಳಮಠದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:05 IST
Last Updated 11 ಸೆಪ್ಟೆಂಬರ್ 2025, 5:05 IST
ಹಾಸನದ ತಣ್ಣಿರುಹಳ್ಳ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 110ನೇ ಜನ್ಮದಿನ ಮತ್ತು ತಣ್ಣೀರುಹಳ್ಳಮಠ ಶ್ರೀಗಳ ದತ್ತಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ವಿಜಯಕುಮಾರ ಸ್ವಾಮೀಜಿ ಮಾತನಾಡಿದರು‌
ಹಾಸನದ ತಣ್ಣಿರುಹಳ್ಳ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 110ನೇ ಜನ್ಮದಿನ ಮತ್ತು ತಣ್ಣೀರುಹಳ್ಳಮಠ ಶ್ರೀಗಳ ದತ್ತಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ವಿಜಯಕುಮಾರ ಸ್ವಾಮೀಜಿ ಮಾತನಾಡಿದರು‌   

ಹಾಸನ: ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ’ ಎಂದು ಹಾಸನ ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ ಹೇಳಿದರು.

ನಗರದ ತಣ್ಣೀರುಹಳ್ಳ ಮಠದ ಸಿದ್ದೇಶ್ವರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಸುತ್ತೂರು ಕ್ಷೇತ್ರದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 110ನೇ ಜನ್ಮದಿನ ಮತ್ತು ತಣ್ಣೀರುಹಳ್ಳ ಮಠ ಶಿವಲಿಂಗ ಸ್ವಾಮೀಜಿಯವರ ದತ್ತಿ ಹಾಗೂ ವಚನ ಕಂಠ ಮಾಡಿದ ವಿದ್ಯಾರ್ಥಿಗಳಿಗೆ ಪುಸ್ತಕ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದ ಶಿವಶರಣರ ವಚನ ಸಾಹಿತ್ಯವನ್ನು ಮನುಕುಲಕ್ಕೆ ಪ್ರಚಾರ ಮಾಡುವುದರ ಜೊತೆಗೆ ಶರಣರು ನೀಡಿದ ಸಂದೇಶವನ್ನು ನಾಡಿನಲ್ಲಿ ಪ್ರಸಾರ ಮಾಡುವ ನಿಟ್ಟಿನಲ್ಲಿ ಸುತ್ತೂರಿನ ಮಹಾಸಂಸ್ಥಾನದ ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಥಾಪಿಸಿದ್ದಾರೆ’ ಎಂದರು.

ADVERTISEMENT

‘ಬಸವಣ್ಣನವರು ಮಾನವ ಧರ್ಮವನ್ನು ಸಂರಕ್ಷಣೆ ಮಾಡಿದ ಮಹಾನ್ ಪುರುಷ. ಬಸವಾದಿ ಶರಣರು ಅಂದಿನ ಕಾಲದಲ್ಲಿ, ಸಮಾಜದಲ್ಲಿ ಅಡಗಿದ ಅಸಮಾನತೆ ಮತ್ತು ಜಾತಿಗಳ ಬಡಿದಾಟಗಳನ್ನು ಕಂಡು, ಅನುಭವ ಮಂಟಪ ನಿರ್ಮಿಸಿದರು. ಸ್ತ್ರೀಯರಿಗೆ ಸಮಾನತೆ ನೀಡಿ, ಹೆಣ್ಣಿಗೆ ದೈವತ್ವ ಸ್ಥಾನ ನೀಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ’ ಎಂದರು.

ವಚನ ಕ್ರಾಂತಿ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ 12ನೇ ಶತಮಾನದ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯನ್ನು ಉಳಿಸಿ-ಬೆಳೆಸಬೇಕು ಎಂಬ ಹಂಬಲದಿಂದಲೇ ಸುತ್ತೂರಿನ ಸ್ವಾಮೀಜಿಗಳು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಸ್ಥಾಪನೆ ಮಾಡಿದ್ದಾರೆ. ಪರಿಷತ್ತು ಶರಣ ವಚನಗಳನ್ನು ಜನಸಾಮಾನ್ಯರಿಗೆ ತಿಳಿಸುವ ದಿಸೆಯಲ್ಲಿ ಮುಂದಾಗಬೇಕಿದೆ ಎಂದರು.

ವಿಶ್ವ ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯ ಘಟಕದ ಉಪಾಧ್ಯಕ್ಷ ಸುತ್ತೂರು ಬಿ.ಅರ್. ಪಂಚಾಕ್ಷರಿ ದತ್ತಿ ಉಪನ್ಯಾಸ ನೀಡಿದರು. ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ನೇತೃತ್ವ ವಹಿಸಿದ್ದರು. ‌ತಣ್ಣೀರುಹಳ್ಳಮಠ ಸಿದ್ದೇಶ್ವರ ವಿದ್ಯಾಸಂಸ್ಥೆಯ ನಿರ್ದೇಶಕ ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪುರ ಪುಟ್ಟರಾಜು ಉದ್ಘಾಟಿಸಿದರು.

ಹಾಸನ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷರು ಗಿರಿಜಾ ನಿರ್ವಾಣಿ, ಶರಣ ಸಾಹಿತ್ಯ ಪರಿಷತ್‌ ಯುವ ಘಟಕದ ನೂತನ ಪ್ರಧಾನ ಕಾರ್ಯದರ್ಶಿ ಅರ್.ಕೆ. ಶ್ರೀನಿವಾಸ್, ಪ್ರಾಂಶುಪಾಲ ತುಂಗರಾಜ್, ಮುಖ್ಯ ಶಿಕ್ಷಕ ಎನ್.ಎನ್. ಮಲ್ಲಿಕಾರ್ಜುನ ಮುಂತಾದವರು ಇದ್ದರು.

ಜನಸಾಮಾನ್ಯರಿಗೆ ಶರಣ ವಚನ ತಿಳಿಸುವ ದಿಸೆಯಲ್ಲಿ ಕಾರ್ಯ ಮಾನವ ಧರ್ಮವನ್ನು ಸಂರಕ್ಷಣೆ ಮಾಡಿದವರು ಬಸವಣ್ಣ ವಚನ ಕ್ರಾಂತಿ ಮೂಲಕ ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ

ನುಡಿದಂತೆ ನಡೆ ನಡೆದಂತೆ ನುಡಿಯ ಮೂಲಕ ಬದುಕು ಮಾದರಿ ಆಗಬೇಕಿದೆ. ಈ ನಿಟ್ಟಿನಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂದೇಶವನ್ನು ಸರ್ವರೂ ಪಾಲಿಸಬೇಕು.
ಕಟ್ಟಾಯ ಶಿವಕುಮಾರ್ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.