ಹಾಸನ: ಶೃಂಗೇರಿಯ ಶಾರದಾಂಬೆ ಪೂಜೆಯಲ್ಲಿ ತಮ್ಮೊಂದಿಗೆ ಭಾಗಿಯಾಗಿದ್ದ ಸೋದರ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಇಳಿಸಿ ಹೋಗುವುದಕ್ಕಾಗಿಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಲಿಕಾಪ್ಟರ್ನಲ್ಲಿ ತವರು ಜಿಲ್ಲೆ ಹಾಸನಕ್ಕೆ ಬಂದು ಹೋದರು.
ಸಹೋದರರಿಬ್ಬರು ಮಧ್ಯಾಹ್ನ 12.40 ರ ಸುಮಾರಿಗೆ ಶೃಂಗೇರಿಯಿಂದ ನೇರವಾಗಿ ಹಾಸನಕ್ಕೆ ಬಂದರು. ಹೊಸ ಬಸ್ ನಿಲ್ದಾಣ ಬಳಿ ಇರುವ ಹೆಲಿಪ್ಯಾಡ್ನಲ್ಲಿ ರೇವಣ್ಣ ಅವರನ್ನು ಇಳಿಸಿದ ಕುಮಾರಸ್ವಾಮಿ ತಾವು, ಬಂದ ಹಾಗೆಯೇ ಮಡಿಕೇರಿಗೆ ತೆರಳಿದರು. ಇದರಿಂದ ಸಿ.ಎಂಗೆ ಗೌರವ ವಂದನೆ ಸಲ್ಲಿಸಲು, ಪೊಲೀಸರು ಮಾಡಿಕೊಂಡಿದ್ದ ಎಲ್ಲಾ ಸಿದ್ಧತೆ ವ್ಯರ್ಥವಾಯಿತು.
ಸೋದರ ಮರಳಿದ ನಂತರ ಮಾತನಾಡಿದ ರೇವಣ್ಣ, ‘ಶೃಂಗೇರಿಯಲ್ಲಿ ಮಾಮೂಲಿ ಅಮಾವಾಸ್ಯೆ ಪೂಜೆ ಮಾಡಿದ್ದೇವೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ರಾಜೇಗೌಡ ಅವರು ಆಹ್ವಾನಿಸಿದ್ದರು. ಹರದನಹಳ್ಳಿಯಲ್ಲಿ ಮನೆ ದೇವರ ಪೂಜಾ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಹೆಲಿಕಾಪ್ಟರ್ನಿಂದ ತಾವು ಇಳಿದುಕೊಂಡಿದ್ದು, ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಂಂತ್ರಿ ಕೊಡಗು ಜಿಲ್ಲೆಗೆ ತೆರಳಿದರು’ ಎಂದು ರೇವಣ್ಣ ಸ್ಪಷ್ಟಪಡಿಸಿದರು.
‘ಸಿದ್ಧಗಂಗಾ ಸ್ವಾಮೀಜಿ ಬೇಗ ಗುಣಮುಖರಾಗಲಿ ಎಂದು ನಾನು, ಸಿ.ಎಂ ಶೃಂಗೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಶ್ರೀ ಗಳಿಗೆ ತಗುಲುವ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಸಂಪೂರ್ಣ ಭರಿಸಲಿದೆ’ ಎಂದರು.
ಮತ್ತೊಂದೆಡೆ ಸಂಸದ ಎಚ್.ಡಿ.ದೇವೇಗೌಡ ಅವರು ಪತ್ನಿ ಚೆನ್ನಮ್ಮ ಸಮೇತ ಹುಟ್ಟೂರು ಹರದನಹಳ್ಳಿಯ ಶಿವ ದೇವಾಲಯದಲ್ಲಿ ಅಮಾವಾಸ್ಯೆ ಹಾಗೂ ಕಡೇ ಕಾರ್ತಿಕ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.